ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. ಮನ್ ಕೀ ಬಾತ್ ಅಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಜು-೨೧:ಪ್ರಧಾನಿ ನರೇಂದ್ರ ಮೋದಿ ಅವರಂಥ ನಾಟಕಕಾರನನ್ನು ನಾನು ನೋಡಿಯೇ ಇಲ್ಲ. ಮಾತುಗಳಿಂದ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. ಮನ್ ಕೀ ಬಾತ್ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಮಾಡಿದ ಅಪಪ್ರಚಾರದಿಂದ ನಮಗೆ ಸೋಲಾಯಿತು. ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿಗಿಂತ ಮುಂದೆ ಇದ್ದೇವೆ. ಆದರೂ ಹೆಚ್ಚು ಸ್ಥಾನಗಳನ್ನು ಗಳಿಸಲು ಆಗಿಲ್ಲ ಎಂದರು. ಈಗ ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡಬೇಡಿ. ರೀಚಾರ್ಜ್ ಆಗುವ ಮೂಲಕ ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ಕರೆ ನೀಡಿದರು.

ನರೇಂದ್ರ ಮೋದಿಯವರು ಕಳೆದ ಐದು ವರ್ಷದಲ್ಲಿ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ಜನರಿಗೆ ವಿವರಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಎಲ್ಲ ವರ್ಗದವರ ಪರವಾಗಿ ಕೆಲಸ ಮಾಡಿದ ಸರಕಾರ ನಮ್ಮದು. ಆದರೆ ಬಿಜೆಪಿಯವರು ಎಲ್ಲ ವರ್ಗದವರ ಪರವಾಗಿ ಇಲ್ಲ. ಸಾಮಾಜಿಕ ನ್ಯಾಯದಲ್ಲಿ ಅವರಿಗೆ ನಂಬಿಕೆಯೇ ಇಲ್ಲ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.

ಕೇಂದ್ರ ಸರಕಾರದಿಂದ ಕಳೆದ ಐದು ವರ್ಷದಲ್ಲಿ ರಾಜ್ಯದ ರೈತರಿಗೆ ಆಗಿರುವ ಅನ್ಯಾಯ ಅಷ್ಟಿಷ್ಟಲ್ಲ. ರೈತರ ವಿಚಾರದಲ್ಲಿ ಹಲವು ಬಾರಿ ಬರೆದ ಪತ್ರಗಳಿಗೆ ಪ್ರಧಾನಿಯವರಿಂದ ಯಾವುದೇ ಉತ್ತರವೇ ಇಲ್ಲ. ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿಯವರು ಘೋಷಿಸಿದ್ದು, ಬಳಿಕ ಜಾರಿಗೆ ತಂದ ಕಾರ್ಯಕ್ರಮಗಳೇನು ? ಯಾವ ಯಾವ ವಿಷಯದಲ್ಲಿ ಅವರು ಯೂ ಟರ್ನ್ ತೆಗೆದುಕೊಂಡರು ಎಂಬುದನ್ನು ನಾವು ಜನರಿಗೆ ವಿವರಿಸುವ ಕೆಲಸ ಮಾಡಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಇಲ್ಲಿಗೆ ಬಂದು ನಮ್ಮ ಸರಕಾರವನ್ನು ಪರ್ಸಂಟೇಜ್ ಸರಕಾರ ಎಂದು ಟೀಕಿಸಿದರು. ಆದರೆ ಲೋಕಪಾಲ ಮಸೂದೆ ಕುರಿತು ಈ ವರೆಗೆ ಚಕಾರ ಎತ್ತಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಆಗಬೇಕು ಎಂದು ಹೇಳಿದರು.

Siddaramaiah,KPCC Meeting,PM Narendra modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ