ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ತನಿಕೆಗೆ ಒತ್ತಾಯ

ಉಡುಪಿ, ಜು.19- ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಶ್ರೀಗಳ ಪರ ವಕೀಲ ರವಿಕಿರಣ್ ಮುರ್ಡೇಶ್ವರ್ ಆಗ್ರಹಿಸಿದ್ದಾರೆ. ಪಟ್ಟ ದೇವರ ವಿಚಾರದ ಬಗ್ಗೆ ಮಾತನಾಡುವಾಗ ಶಿರೂರು ಶ್ರೀಗಳು ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು. ಪುತ್ತಿಗೆ ಶ್ರೀಗಳನ್ನು ಹೊರತುಪಡಿಸಿ ಆರು ಶ್ರೀಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ತಿಳಿಸಿದ್ದರು. ಅಪಾಯದ ಮುನ್ಸೂಚನೆ ಕುರಿತು ನನ್ನ ಬಳಿ ಶ್ರೀಗಳು ಚರ್ಚಿಸಿದ್ದರು. ತಮ್ಮ ಬದುಕಿನ ಬಗ್ಗೆ ತೀವ್ರ ಆತಂಕ ಕೂಡ ವ್ಯಕ್ತಪಡಿಸಿದ್ದರು ಎಂದು ವಕೀಲರು ಹೇಳಿದ್ದಾರೆ.
ಕ್ರಿಮಿನಲ್ ಕೇಸು ದಾಖಲಿಸುವ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದೆ. ಅಂತಹ ಸಂದರ್ಭದಲ್ಲೇ ಅವರ ಸಾವು ಸಿಡಿಲಿನಂತೆ ಬಂದಿದೆ. ಸ್ವಾಮೀಜಿ ಸಾವಿಗೆ ಕಾರಣ, ನಿಜಾಂಶ ಬೆಳಕಿಗೆ ಬಂದರೆ ಅವರ ಹೋರಾಟಕ್ಕೆ ಅರ್ಥ ಮತ್ತು ಬೆಲೆ ಬರುತ್ತದೆ ಎಂದು ರವಿಕಿರಣ್ ಹೇಳಿದ್ದಾರೆ. ಮರಣೋತ್ತರ ವರದಿ ಬಂದ ನಂತರ ಶ್ರೀಗಳ ಸಾವಿನ ನಿಖರ ಕಾರಣ ಗೊತ್ತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ