ಲಕ್ಷ್ಮೀವರ ತೀರ್ಥ ಶ್ರೀಪಾದರು ವಿಧಿವಶ

ಉಡುಪಿ, ಜು.19- ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಅವರ ಸಾವು ನಿಗೂಢವಾಗಿದ್ದು, ಸಾವು ಹೇಗೆ ಸಂಭವಿಸಿದೆ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಶಿರೂರು ಮಠದ ಭಕ್ತರು ಆರೋಪಿಸಿದ್ದಾರೆ.
ವಿಷ ಪ್ರಾಶನವಾಗಿದೆಯೋ ಅಥವಾ ಸ್ವಾಮೀಜಿ ಅವರು ಸೇವಿಸಿದ ಆಹಾರ ವಿಷವಾಗಿದೆಯೋ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಶ್ರೀಗಳ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ.
ಜುಲೈ 16ರಂದು ಶಿರೂರು ಮೂಲ ಮಠದಲ್ಲಿ ಆಯೋಜಿಸಿದ್ದ ವನಮಹೋತ್ಸವದ ವೇಳೆ ಆಹಾರ ಸೇವಿಸಿದ್ದ ಬಳಿಕ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಮೊದಲು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆಯಾಗದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ರಕ್ತಸ್ರಾವ ಹಾಗೂ ಉಸಿರಾಟ ತೊಂದರೆಯಿಂದ ಸ್ವಾಮೀಜಿಯವರು ಇಂದು ಬೆಳಗ್ಗೆ 8.30ಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ.ಅವಿನಾಶ್‍ಶೆಟ್ಟಿ ತಿಳಿಸಿದ್ದಾರೆ.
ಸ್ವಾಮೀಜಿಗಳ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡಿದೆವು. ಆದರೆ, ಬಹುಅಂಗಾಗಳ ವೈಫಲ್ಯದಿಂದ ಸ್ವಾಮೀಜಿ ಮೃತಪಟ್ಟರು ಎಂದು ಸ್ಪಷ್ಟಪಡಿಸಿದರು. ಶ್ರೀಗಳನ್ನು ಉಳಿಸಿಕೊಳ್ಳಲು ನಾವು ಸತತ ಪ್ರಯತ್ನ ಪಟ್ಟೆವು. ಆದರೆ, ಪ್ರಯೋಜನವಾಗಲಿಲ್ಲ. ವಿಷ ಪ್ರಾಶನವಾಗಿರುವ ಶಂಕೆ ಇದೆ. ಈ ಕುರಿತು ಪೆÇಲೀಸರಿಗೆ ಮಾಹಿತಿ ಕೊಟ್ಟಿದ್ದೇವೆ. ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆ ಗೆ ಕಳುಹಿಸಲಾಗಿದೆ ಎಂದರು.
ಪಟ್ಟದೇವರ ವಿಷಯದಲ್ಲಿ ಕೆಲವರ ವಿರುದ್ಧ ಶಿರೂರು ಶ್ರೀಗಳು ತಿರುಗಿ ಬಿದ್ದಿದ್ದರು. ವಿಠಲನ ಮೂರ್ತಿಯನ್ನು ಹಿಂದಿರುಗಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಈ ಸಂಬಂಧ ಕಾನೂನು ಹೋರಾಟ ಮಾಡುವುದಾಗಿಯೂ ಕಳೆದೆರೆಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು.
ರಾಜಕಾರಣದಲ್ಲಿಯೂ ಆಸಕ್ತಿ ಹೊಂದಿದ್ದ ಶ್ರೀಗಳು ಬಿಜೆಪಿ ಸೇರಲು ಮುಂದಾಗಿದ್ದರು. ಅಲ್ಲದೆ, ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ನಾಮಪತ್ರ ವಾಪಸ್ ಪಡೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದ್ದಕ್ಕಿದ್ದಂತೆ ಶ್ರೀಗಳು ನಿಗೂಢವಾಗಿ ಸಾವನ್ನಪ್ಪಿರುವುದು ಭಕ್ತ ವೃಂದದಲ್ಲಿ ತೀವ್ರ ಶಂಕೆ ಉಂಟು ಮಾಡಿದೆ. ಲಕ್ಷ್ಮೀವರ ತೀರ್ಥರದು ಸಹಜವಾದ ಸಾವಲ್ಲ. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ಬಹುಮುಖ ಪ್ರತಿಭೆಯ ಶ್ರೀಗಳು:
8ನೆ ವಯಸ್ಸಿಗೆ ಸನ್ಯಾಸ ಸ್ವೀಕರಿಸಿದ ಶ್ರೀಗಳು ಬಹುಮುಖ ಪ್ರತಿಭೆ ಹೊಂದಿದ್ದರು. ಶಿರೂರು ಮಠದ 30ನೆ ಯತಿಗಳಾಗಿದ್ದ ಅವರು,ಮೂರು ಪರ್ಯಾಯ ಪೂರೈಸಿದ್ದ ರು.
ವಿಠ್ಠಲ ಆಚಾರ್ಯ-ಕುಸುಮಾ ಆಚಾರ್ಯ ದಂಪತಿ ಪುತ್ರರಾದ ಶ್ರೀಗಳು 1971ರಲ್ಲಿಯೇ ಸನ್ಯಾಸ ಸ್ವೀಕರಿಸಿದ್ದರು. ಹೆಬ್ರಿ ತಾಲೂಕಿನ ಮಡಮಕ್ಕಿ ಗ್ರಾಮದಲ್ಲಿ ಶ್ರೀಗಳ ಮೂಲ ಮನೆಯಿದೆ. ಸಂಗೀತ ಪ್ರೇಮಿಯೂ ಆದ ಇವರು ಡ್ರಮ್ ಬಾರಿಸುವುದನ್ನು ಕರಗತ ಮಾಡಿಕೊಂಡಿದ್ದರು. ಉತ್ತಮ ಈಜುಪಟು ವಾಗಿದ್ದ ಅವರು, ಕರಾಟೆಯಲ್ಲೂ ನಿಪುಣರಾಗಿದ್ದರು. ಈ ಹಿಂದೆ ಗೋಪಾಲ್ ಕಾರ್ವಿ ಅವರು ಮಲ್ಪೆ ಸಮುದ್ರದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವ ಉದ್ದೇಶದಿಂದ ಮ್ಯಾರಥಾನ್ ಈಜಿನ ಸಂದರ್ಭದಲ್ಲಿ ಶ್ರೀಗಳವರು ಸಹ ಕೆಲವು ಕಿಲೋಮೀಟರ್‍ಗಳಷ್ಟು ದೂರ ಸಮುದ್ರದಲ್ಲಿ ಈಜಿ ತಾವೊಬ್ಬ ಉತ್ತಮ ಈಜುಪಟು ಎಂಬುದನ್ನು ನಿರೂಪಿಸಿದ್ದರು. ಎಲ್ಲರೊಡನೆ ಬೆರೆಯುವ ಸ್ವಭಾವ ಇವರದಾಗಿತ್ತು. ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಭಕ್ತಸಮೂಹ ಕಣ್ಣೀರಿಟ್ಟಿತು. ಅಷ್ಟ ಮಠಗಳ ಸಂಪ್ರದಾಯದಂತೆ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ನಡೆಯಲಿವೆ.
ಕೃಷ್ಣಮಠದ ರಥಬೀದಿಯಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಗುವುದು. ಬಳಿಕ ಶಿರೂರು ಮೂಲ ಮಠಕ್ಕೆ ಒಯ್ಯಲಾಗುವುದು ಎಂದು ಮಠದ ಮೂಲಗಳು ಹೇಳಿವೆ. ಶ್ರೀಗಳ ನಿಧನದಿಂದ ಇಡೀ ಊರಿಗೆ ಊರೇ ದುಃಖಸಾಗರದಲ್ಲಿ ಮುಳುಗಿದೆ. ಅಂತಿಮ ದರ್ಶನಕ್ಕೆ ಭಕ್ತರ ದಂಡೇ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದು, ಶಿರೂರಿನಲ್ಲಿ ನೀರವ ಮೌನ ಆವರಿಸಿದೆ. ಶ್ರೀಗಳ ನಿಧನಕ್ಕೆ ಅನೇಕ ಗಣ್ಯರು, ಮಠಾಧೀಶರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ