ಕನ್ನಡ ಚಿತ್ರೋದ್ಯಮಕ್ಕೆ ಅನುಕೂಲ

 

ಬೆಂಗಳೂರು,ಜು.14- ರಾಮನಗರದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದರಿಂದ ಕನ್ನಡ ಚಿತ್ರೋದ್ಯಮಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯನದ ಸೀತಾರಾಮ ಕಲ್ಯಾಣ ಚಿತ್ರದ ಸುದ್ದಿಗೋಷ್ಟಿ ನಂತರ ಮಾತನಾಡಿದ ಅವರು, ಸುಮಾರು ಐದು ಸಾವಿರ ಎಕರೆ ಜಾಗದಲ್ಲಿ 30ರಿಂದ 30 ಕೋಟಿ ವೆಚ್ಚದಲ್ಲಿ ಹೈದರಾಬಾದ್‍ನ ರಾಮೋಜಿರಾವ್ ಫಿಲಂ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಿಸುವ ಉದ್ದೇಶವಿದೆ. ಒಮ್ಮೆ ಚಿತ್ರತಂಡ ಚಿತ್ರನಗರಿಗೆ ತೆರಳಿದರೆ ಚಿತ್ರ ನಿರ್ಮಾಣದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿಯೇ ಹೊರಬರಬೇಕು. ನೇರ ಸೆನ್ಸಾರ್‍ಗೆ ಚಿತ್ರವನ್ನು ಕಳುಹಿಸುವ ಮಟ್ಟಿಗೆ ಚಿತ್ರ ನಿರ್ಮಾಣ ಪೂರ್ಣಗೊಳಿಸಲು ಅನುವಾಗುವಂತೆ ಎಲ್ಲ ವ್ಯವಸ್ಥೆಯನ್ನು ಚಿತ್ರನಗರಿಯಲ್ಲಿ ಕಲ್ಪಿಸುವ ಯೋಜನೆ ಇದೆ ಎಂದರು.
ಇದಕ್ಕೆ ರಾಜ್ಯ ಸರ್ಕಾರ ಒಂದು ಭಾಗದ ವೆಚ್ಚ ಭರಿಸಿದರೆ ಉಳಿದ ಮೂರು ಭಾಗವನ್ನು ಎನ್‍ಆರ್‍ಐಗಳು ಭರಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಲಾಗುತ್ತಿದೆ. ರಾಮನಗರದಲ್ಲಿ ಚಿತ್ರನಗರಿ ನಿರ್ಮಿಸುವುದರಿಂದ ಇತ್ತ ಬೆಂಗಳೂರಿಗೂ ತೀರಾ ಸಮೀಪವಾಗಲಿದ್ದು, ಮೈಸೂರು, ಊಟಿ ಸೇರಿದಂತೆ ಚಿತ್ರೀಕರಣಕ್ಕೆ ತೆರಳಲು ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ನಾನು ರಾಮನಗರ ಕ್ಷೇತ್ರವನ್ನು ಬಲ್ಲವನಾಗಿದ್ದೇನೆ. ಆ ಜಾಗದಲ್ಲಿ ಏನೇನು ವ್ಯವಸ್ಥೆ ಇದೆ ಎಂಬುದು ತಿಳಿದಿದೆ. ಹಾಗಾಗಿ ಇಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದರಿಂದ ಹೆಚ್ಚು ಅನುಕೂಲವೇ ಆಗಲಿದೆ ಎಂದರು.
ಸಿದ್ದರಾಮಯ್ಯನವರು ಮೈಸೂರು-ನಂಜನಗೂಡು ರಸ್ತೆಯಲ್ಲಿ 150 ಎಕರೆ ಪ್ರದೇಶದಲ್ಲಿ ಫಿಲಿಂ ಸಿಟಿ ಮಾಡಲು ಉದ್ದೇಶಿಸಿದ್ದರು. ಆದರೆ ಈ ಬಗ್ಗೆ ನೀಲಾ ನಕ್ಷೆಯೂ ಇನ್ನು ಸಿದ್ದವಾಗಿಲ್ಲ. ಚಿತ್ರೋದ್ಯಮದ ಬಗ್ಗೆ ಚೆನ್ನಾಗಿ ಅರಿತಿರುವ ನಾನು ಈಗಾಗಲೇ ಈ ಕ್ಷೇತ್ರದಲ್ಲಿ ನಿರ್ಮಾಪಕನಾಗಿ, ವಿತರಕನಾಗಿ, ಹಂಚಿಕೆದಾರರನಾಗಿ ಕೆಲಸ ಮಾಡಿದ್ದೇನೆ. ಚಿತ್ರೋದ್ಯಮಕ್ಕೆ ಅಗತ್ಯವಾಗಿರುವ ಚಿತ್ರನಗರಿಯನ್ನು ನಿರ್ಮಿಸಲು ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ