ಎಫ್‍ಕೆಸಿಸಿಐ ಅಧ್ಯಕ್ಷರಾಗಿ ಸುಧಾಕರ ಎಸ್. ಶೆಟ್ಟಿ ಅಧಿಕಾರ ಸ್ವೀಕಾರ

 

ಬೆಂಗಳೂರು, ಜೂ.30-ಉದ್ಯಮಿ, ಶಿಕ್ಷಣ ತಜ್ಞ ಹಾಗೂ ಸಮಾಜ ಸೇವಕ ಸುಧಾಕರ ಎಸ್. ಶೆಟ್ಟಿ ಅವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಎಫ್‍ಕೆಸಿಸಿಐ) ಅಧ್ಯಕ್ಷರಾಗಿ ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ.

ಎಫ್‍ಕೆಸಿಸಿಐನ 102ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ ಶೆಟ್ಟಿ ಅವರು ಬಹುಮುಖ ಪ್ರತಿಭೆಯ ಉದ್ಮಮಿ. ಶಿಕ್ಷಣ ತಜ್ಞರು, ಪ್ರಕಾಶಕರು, ಹೈನು ಕೃಷಿಕರು, ರಫ್ತುದಾರರು, ಭೂ ಅಭಿವೃದ್ದಿಗಾರರು ಹಾಗೂ ಸಮಾಜಸೇವಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಎಫ್‍ಕೆಸಿಸಿಐನ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಅವರು ಜಿಲ್ಲೆಗಳ ಅಭಿವೃದ್ದಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಲವು ಪ್ರಶಸ್ತಿ ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ.

ಸಿ.ಆರ್.ಜನಾರ್ಧನ್ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಯಶಸ್ವಿ ಉದ್ಯಮಿ. ಈ ಹಿಂದೆ ಕಾಸಿಯಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜರ್ನಾಧನ್ ರಾಜ್ಯದಲ್ಲಿ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಅಭಿವೃದ್ದಿಗಾಗಿ ಶ್ರಮಿಸಿದ್ಧಾರೆ.
ಪೆರಿಕಲ್ ಎಂ ಸುಂದರ್ ಅವರು ಎಫ್‍ಕೆಸಿಸಿಐ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇವರು ಒಕ್ಕೂಟದ ಹಿರಿಯ ಸದಸ್ಯರಾಗಿದ್ದು, ತಮ್ಮ ಕುಟುಂಬದ ವ್ಯವಹಾರವಾದ ಮಾರ್ಡನ್ ಕಾಫಿಯ ಪಾಲುದಾರರು. ಕಳೆದ ಎರಡು ದಶಕಗಳಿಂದ ವಾಣಿಜ್ಯ ಚಟುವಟಿಕೆಯಲ್ಲಿ ಸುಂದರ್ ಸಕ್ರಿಯರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ