ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ; 6 ಯೋಧರು ಹುತಾತ್ಮ!

ರಾಂಚಿ: ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾರ್ಖಂಡ್ ಮತ್ತು ಛತ್ತೀಸ್​ಗಢದ ಗಡಿಯಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಯೋಧರನ್ನು ಗುರಿಯಾಗಿರಿಸಿಕೊಂಡು ನಕ್ಸಲರು ನಡೆಸಿದ ಗುಂಡಿನ ದಾಳಿಗೆ ಜಾಗ್ವಾರ್​ ಪೋರ್ಸ್​ನ 6 ಯೋಧರು ಹುತಾತ್ಮರಾಗಿದ್ದಾರೆ. ಅಂತೆಯೇ 10 ಮಂದಿ ಸೈನಿಕರಿಗೆ ಗಂಭೀರಗಾಯಗಳಾಗಿವೆ.

ಈ ಬಗ್ಗೆ ಮಾಬಹಿತಿ ನೀಡಿರುವ ಸೇನಾಧಿಕಾರಿಗಳು ಜಾರ್ಖಂಡ್​ನ ಗರ್ವಾ ಜಿಲ್ಲೆಯ ಬುಧಪಹದ್​ ಪ್ರದೇಶದಲ್ಲಿ ನಕ್ಸಲರು ನಡೆಸಿದ ಲ್ಯಾಂಡ್​ಮೈನ್​ ಸ್ಫೋಟದಿಂದಾಗಿ 4 ಯೋಧರು ಹುತಾತ್ಮರಾಗಿದ್ದು, ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಗರ್ವಾ ಜಿಲ್ಲೆಯ ಚಿಂಜೋ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಬಗ್ಗೆ ಪೊಲೀಸರ ಬಳಿ ಮಾಹಿತಿ ಇತ್ತು. ಮಂಗಳವಾರ ಸಂಜೆ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ಹೋದಾಗ ನಕ್ಸಲರು ದಾಳಿ ನಡೆಸಿದ್ದಾರೆ ಎಂದು ಡಿಐಜಿ ವಿಪುಲ್​ ಶುಕ್ಲ ತಿಳಿಸಿದ್ದಾರೆ.

ಅಂತೆಯೇ ಈ ನಕ್ಸಲ್​ ಕಾರ್ಯಾಚರಣೆಯ ಹಿಂದೆ ಮಾಸ್ಟರ್​ಮೈಂಡ್​ ನಕ್ಸಲ್​ ನಾಯಕ ವಿಶ್ವನಾಥ್​ ಅಲಿಯಾಸ್​ ಸಂತೋಷ್ ಇರುವುದಾಗಿ ತಿಳಿದಿಬಂದಿದ್ದು, ವಿಶ್ವನಾಥ್​ ಆಂಧ್ರ ಪ್ರದೇಶದಿಂದ ಜಾರ್ಖಂಡ್​ಗೆ ಬಂದಿರುವುದಾಗಿ ತಿಳಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಕೋಬ್ರಾ ತಂಡ, ಸಿಆರ್​ಪಿಎಫ್​ ಪಡೆ ಹಾಗೂ ಪೊಲೀಸ್​ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ