ಮಕ್ಕಳಿಗೆ ಟಿವಿ, ಮೊಬೈಲ್ ಮತ್ತು ಇತರೆ ಇಲೆಕ್ಟ್ರಾನಿಕ್ ಪದಾರ್ಥಗಳಿಂದ ತೊಂದರೆ

ಬೆಂಗಳೂರು: ಶಾಲಾ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಳ ಮೂಡಿಸುವ ವಿಶೇಷ ಕಾರ್ಯಾಗಾರ ಬೆಂಗಳೂರಿನ ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಿತು.

‘ವೈದ್ಯಲೋಕ’ ಮತ್ತು ‘ಹೆಲ್ತ್ ವಿಷನ್’ ಆರೋಗ್ಯ ಮಾಸಪತ್ರಿಕೆಯ ಆರೋಗ್ಯ ಜಾಗೃತಿ ಅಭಿಯಾನ `ಆರೋಗ್ಯ ನಂದನ’ದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡರು. ಡಾ|| ಪತ್ತಾರ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹೋಮಿಯೋಪತಿ ತಜ್ಞ ವೈದ್ಯರಾದ ಡಾ|| ಪಿ.ವಿ. ಪತ್ತಾರ್ ಮತ್ತು ಡಾ|| ಪ್ರಮೋದ್ ವಿ. ಪತ್ತಾರ್ ಮಕ್ಕಳ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಳಕ್ಕಾಗಿ ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆ ವಿವರಿಸಿದರು. ಸಮಸ್ಯೆ ಇರುವ ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ಅವರು ಉಚಿತವಾಗಿ ಔಷಧ ವಿತರಿಸಿದರು. ಮನೆಯಲ್ಲಿ ಪಾಲಕರು ಮಕ್ಕಳ ಮುಂದೆ ಹೆಚ್ಚು ಟಿವಿ ವೀಕ್ಷಿಸುವುದನ್ನು ಕಡಿಮೆ ಮಾಡುವುದರ ಜೊತೆಗೆ ಮಕ್ಕಳು ಮೊಬೈಲ್‍ನಲ್ಲಿ ಕಾಲ ಕಳೆಯುವುದನ್ನು ತಡೆಯಬೇಕು. ಹಾಗೆಯೇ ಮನೆಯಲ್ಲಿ ಪೋಷಕಾಂಶವುಳ್ಳ ಉತ್ತಮ ಅಡುಗೆ ಮಾಡಿ ಮಕ್ಕಳಿಗೆ ನೀಡಬೇಕು. ಹೋಟೆಲ್‍ನಲ್ಲಿ ಜಂಕ್‍ಫುಡ್‍ಗಳ ಸೇವನೆ ಕಡಿಮೆ ಮಾಡಬೇಕು ಎಂದು ಧನ್ವಂತರಿ ಆರೋಗ್ಯ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷರೂ ಆಗಿರುವ ತಜ್ಞ ವೈದ್ಯ ಡಾ. ಪಿ.ವಿ. ಪತ್ತಾರ್ ಹೇಳಿದರು.

ಕಾಮಧೇನು ಶಿಕ್ಷಣ ಸೇವಾ ಟ್ರಸ್ಟ್‍ನ ಎಸ್. ಶಂಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಾಟಕ ಕಲಾವಿದರಾದ ಮೈಸೂರಿನ ಉಮಾರಮೇಶ್, ಆರೋಗ್ಯ ನಂದನ ಯೋಜನೆಯ ಸಂಚಾಲಕರಾದ ಎನ್.ವಿ. ರಮೇಶ್, ವೈದ್ಯಲೋಕ ಹೆಲ್ತ್ ವಿಷನ್ ಮಾಸಪತ್ರಿಕೆಗಳ ವ್ಯವಸ್ಥಾಪಕ ಸಂಪಾದಕರಾದ ಡಾ. ಶ್ರೀಕೃಷ್ಣ ಮಾಯ್ಲೆಂಗಿ, ಭಾರತ್ ವಿದ್ಯಾನಿಕೇತನ್ ಶಾಲೆಯ ಪ್ರಾಂಶುಪಾಲರಾದ ಉಷಾ ಶೇಖರ್, ಆಹಾರ ತಜ್ಞ ಪ್ರತಾಪ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ, ಪೋಷಕರಿಗೆ `ವೈದ್ಯಲೋಕ’ ಆರೋಗ್ಯ ಪತ್ರಿಕೆಯನ್ನು ಉಚಿತವಾಗಿ ವಿತರಿಸಲಾಯಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ