ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅಪಾಯದಿಂದ ಪಾರು

ದಾವಣಗೆರೆ, ಜೂ.25- ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಲೆಬೆನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ನಿವಾಸಿ ಸಂಗೀತ ಶಿಕ್ಷಕ ಸಿ.ಎಂ.ಸಿದ್ದರಾಜ, ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಕಲ್ಪನಾ, ಸಿಂಧು, ಸಂಬಂಧಿಗಳಾದ ಭಾಸ್ಕರ್‍ಚಾರ್ ಹಾಗೂ ಶೋಭಾ ಎಂಬುವರು ಕಾರಿನಲ್ಲಿ ದಾವಣಗೆರೆಯಿಂದ ಮಲೆಬೆನ್ನೂರಿನ ಸಂಬಂಧಿಕರ ಮನೆಗೆ ನಿನ್ನೆ ಸಂಜೆ ತೆರಳುತ್ತಿದ್ದರು.
ಈ ವೇಳೆ ಮಲೆಬೆನ್ನೂರು ಸಮೀಪ ಇರುವ ವಿದ್ಯುತ್ ಪ್ರಸರಣ ಕೇಂದ್ರದ ಬಳಿ ಕಾರಿನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಿಂದೆ ಬರುತ್ತಿದ್ದ ಬೈಕ್‍ಸವಾರರು ಇದನ್ನು ನೋಡಿ ಸಿದ್ದರಾಜು ಅವರಿಗೆ ತಿಳಿಸಿದ್ದಾರೆ. ತಕ್ಷಣವೇ ಸಿದ್ದರಾಜು ಕಾರು ನಿಲ್ಲಿಸಿ ಎಲ್ಲರನ್ನೂ ಕೆಳಕ್ಕೆ ಇಳಿಸಿದ್ದಾರೆ. ನಂತರ ಬೆಂಕಿ ಸಂಪೂರ್ಣ ಕಾರನ್ನು ಆವರಿಸಿದೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳೀಯರು ಮತ್ತು ಕುಟುಂಬದವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಸುದ್ದಿ ತಿಳಿದ ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಮಲೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ