ರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ

ದಾಂಡೇಲಿ : ಬರಲಿರುವ ರಂಜಾನ್ ಹಬ್ಬವನ್ನು ನಗರದಲ್ಲಿ ಶಾಂತಿ, ಸೌಹಾರ್ಧಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನಾ ಸಭೆಯು ಸೋಮವಾರ ಸಂಜೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರ ಸಭೆಯ ಅಧ್ಯಕ್ಷೆ ಸರ್ವಧರ್ಮ ಸಮನ್ವಯತೆಗೆ ಹೆಸರಾದ ದಾಂಡೇಲಿಯಲ್ಲಿ ಎಲ್ಲ ಧರ್ಮಗಳ ಹಬ್ಬ ಹರಿದಿನಗಳು ಶಾಂತಿಯಿಂದ ನಡೆಯುತ್ತಿದೆ. ನಾವೆಲ್ಲರು ಒಂದೆ ಎಂಬ ಭಾತೃತ್ವದಡಿ ಇಲ್ಲಿಯ ಜನ ಬದುಕು ಕಟ್ಟಿಕೊಂಡಿರುವುದು ನಗರದ ಶಾಂತಿ ಸುವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ಎಂದ ಅವರು ರಂಜಾನ್ ಹಬ್ಬದ ಶುಭಾಶಯ ಕೋರಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕ ಯಲ್ಲನಗೌಡ ನವಲಗಟ್ಟಿ ಅವರು ದಾಂಡೇಲಿಯ ಜನ ಶಾಂತಿ, ಸೌಹಾರ್ಧತೆಗೆ ವಿಶೇಷವಾದ ಒತ್ತನ್ನು ಕೊಡುತ್ತಿರುವುದು ಶ್ಲಾಘನೀಯ. ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಇಲ್ಲಿನ ಜನತೆ ಇಟ್ಟುಕೊಂಡಿದ್ದಾರೆ. ಬರಲಿರುವ ರಂಜಾನ್ ಹಬ್ಬವನ್ನು ಅತ್ಯಂತ ಶಿಸ್ತು ಬದ್ದವಾಗಿ ಮತ್ತು ಶಾಂತಿ, ಸೌಹಾರ್ಧತೆಯಿಂದ ನಡೆಸುವಂತೆ ವಿನಂತಿಸಿದರು. ನಗರದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ನಗರದ ನಾಗರೀಕರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ನಗರದ ಜನತೆ ಮುಕ್ತವಾಗಿ ಸಂಪರ್ಕಿಸಬಹುದೆಂದು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಪಿಎಸೈ ಪುಟ್ಟೇಗೌಡ ಅವರು ನಗರದ ಜನತೆ ಶಾಂತಿಯುತವಾದ ವಾತವರಣವನ್ನು ನಿರ್ಮಿಸಿ, ನಮ್ಮ ಇಲಾಖೆಗೆ ಅತ್ಯುತ್ತಮ ಸಹಕಾರ ನೀಡುತ್ತಿರುವುದು ಸ್ಮರಣೀಯ. ಈ ನಿಟ್ಟಿನಲ್ಲಿ ನಗರದ ಜನತೆ ಅಭಿನಂದನೆಗೆ ಅರ್ಹರು ಎಂದು ಹೇಳಿದರು.

ಸಭೆಯಲ್ಲಿ ನಗರ ಸಭಾ ಸದಸ್ಯರುಗಳು, ವಿವಿಧ ಸಮಾಜದ ಮುಖಂಡರುಗಳು, ಧಾರ್ಮಿಕ ಮುಖಂಡರುಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

ನಗರ ಠಾಣೆಯ ಪ್ರದೀಪ ನಾಯಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಕಿರಣ್ ನಾಯ್ಕ ವಂದಿಸಿದರು. ಸೋಮು ಅವರು ಕಾರ್ಯಕ್ರಮ ನಿರೂಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ