ಅತಿ ವೇಗ ತಂದ ಅಪಾಯ: ತಡೆಗೋಡೆಗೆ ಬೈಕ್ ಡಿಕ್ಕಿ; ಯೆಮೆನ್ ದೇಶದ ಪ್ರಜೆ ಸಾವು

 

ಬೆಂಗಳೂರು, ಜೂ.12- ಯೆಮೆನ್ ದೇಶದ ಇಬ್ಬರು ಯುವಕರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬಾತ ಸಾವನ್ನಪ್ಪಿರುವ ಘಟನೆ ಬಾಣಸವಾಡಿ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೈಕ್ ಚಾಲನೆ ಮಾಡುತ್ತಿದ್ದ ಅಬ್ದುಲ್ (21) ಮೃತಪಟ್ಟ ದುರ್ದೈವಿಯಾಗಿದ್ದು, ಸ್ನೇಹಿತ ಮಜೀದ್ ಗಾಯಗೊಂಡಿದ್ದಾನೆ.

ಮಧ್ಯಪ್ರಾಚ್ಯದ ಯೆಮೆನ್ ದೇಶದವರಾದ ಅಬ್ದುಲ್ ಮತ್ತು ಮಜೀದ್ ಬೆಂಗಳೂರಿನಲ್ಲಿ ಡಿಫಾರ್ಮ್ ವ್ಯಾಸಂಗ ಮಾಡಲು ಬಂದಿದ್ದರು.
ಥಣಿಸಂದ್ರದ ಕಾಲೇಜೊಂದರಲ್ಲಿ ಡಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಇವರು ಮಾರತ್ತಹಳ್ಳಿಯಲ್ಲಿ ವಾಸವಾಗಿದ್ದರು.
ನಿನ್ನೆ ಸಂಜೆ 6 ಗಂಟೆಯಲ್ಲಿ ಇವರಿಬ್ಬರೂ ಬೈಕ್‍ನಲ್ಲಿ ಹೋಗುತ್ತಿದ್ದರು. ಹೆಣ್ಣೂರು ಫ್ಲೈ ಓವರ್ ಮೇಲೆ ಬರುತ್ತಿದ್ದಂತೆ ಅತಿ ವೇಗದಿಂದಾಗಿ ಬೈಕ್ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಅಬ್ದುಲ್ ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ರಾತ್ರಿ 10.30ರಲ್ಲಿ ಮೃತಪಟ್ಟಿದ್ದಾರೆ.
ಸ್ನೇಹಿತ ಮಜೀದ್ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುದ್ದಿ ತಿಳಿದ ಬಾಣಸವಾಡಿ ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ