ನಟ ಸಲ್ಮಾನ್ ಖಾನ್‍ಗೆ ಸಾರ್ವಜನಿಕ ಸ್ಥಳದಲ್ಲಿ ಥಳಿಸಿದರೆ 2 ಲಕ್ಷ ಬಹುಮಾನ ಘೋಷಣೆ

ಆಗ್ರಾ:ಜೂ-1: ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಸಾರ್ವಜನಿಕ ಸ್ಥಳದಲ್ಲಿ ಥಳಿಸಿದರೆ 2 ಲಕ್ಷ ಬಹುಮಾನ ನೀಡುವುದಾಗಿ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ನೂತನ ಸಂಘಟನೆಯಾದ ಹಿಂದೂ ಹೀ ಆಗೇ ಆಗ್ರಾ ಘಟಕದ ಮುಖ್ಯಸ್ಥ ಗೋವಿಂದ ಪರಾಶರ್ ಘೋಷಿಸಿದ್ದಾರೆ.

ಸಲ್ಮಾನ್ ಖಾನ್‍ ಅವರ ಸಿನಿಮಾ ನಿರ್ಮಾಣ ಸಂಸ್ಥೆ ಲವ್‍ರಾತ್ರಿ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು, ನವರಾತ್ರಿ ವೇಳೆ ಈ ಚಿತ್ರ ಬಿಡುಗಡೆಯಾಗಲಿದೆ. ಸಲ್ಮಾನ್ ಖಾನ್ ಸಿನಿಮಾಗೆ ಲವ್‍ರಾತ್ರಿ ಎಂಬ ಹೆಸರಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಗೋವಿಂದ್ ದೂರಿದ್ದಾರೆ.

ಗೋವಿಂದ್ ಪರಾಶರ್ ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಭಗ್ವಾನ್ ಟಾಕೀಸ್ ಬಳಿ ಸಲ್ಮಾನ್ ಖಾನ್ ಅವರ ಪೋಸ್ಟರ್‍‍ಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದ್ದಾರೆ.

ಸಲ್ಮಾನ್ ಖಾನ್ ನಿರ್ಮಿಸುತ್ತಿರುವ ಈ ಚಿತ್ರ ನವರಾತ್ರಿಯನ್ನು ಅವಹೇಳನ ಮಾಡಿದಂತಿದೆ. ಈ ಮೂಲಕ ಲಕ್ಷೋಪಲಕ್ಷ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ರೀತಿಯ ನಡೆಯನ್ನು ನಾವು ಖಂಡಿಸುತ್ತಿದ್ದು, ಈ ಸಿನಿಮಾವನ್ನು ನಿಷೇಧಿಸಲು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೆ ನಾವು ತೀವ್ರ ರೀತಿಯಲ್ಲಿ ಪ್ರತಿಭಟಿಸುತ್ತೇವೆ. ಹಿಂದೂ ಭಾವನೆಗಳಿಗೆ ಧಕ್ಕೆ ತರುವುದನ್ನು ನಾವು ಸಹಿಸುವುದಿಲ್ಲ. ಹಾಗಾಗಿಯೇ ಹಿಂದೂ ಹೀ ಆಗೇ ಸಂಘಟನೆಯ ಆಗ್ರಾ ಘಟಕ ಅಧ್ಯಕ್ಷನಾದ ನಾನು ಸಲ್ಮಾನ್ ಖಾನ್‌‍ಗೆ ಸಾರ್ವಜನಿಕ ಸ್ಥಳದಲ್ಲಿ ಥಳಿಸುವವರಿಗೆ 2 ಲಕ್ಷ ಬಹುಮಾನ ಘೋಷಿಸಿದ್ದೇನೆ ಎಂದಿದ್ದಾರೆ.

ಅಕ್ಟೋಬರ್‍ ತಿಂಗಳಲ್ಲಿ ಲವ್‍ರಾತ್ರಿ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಸಲ್ಮಾನ್‍ ಖಾನ್ ತಂಗಿಯ ಮಗ ಆಯುಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ