ಇಂದಿನ ಬಿಬಿಎಂಪಿ ಸಭೆಯ ಹೈಲೈಟ್

ಬೆಂಗಳೂರು, ಮೇ 30- ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನೂತನ ಶಾಸಕರಿಗೆ ಅಭಿನಂದನೆ, ಅಗಲಿದ ನಾಯಕರಿಗೆ ಸಂತಾಪ ಇವು ಇಂದಿನ ಬಿಬಿಎಂಪಿ ಸಭೆಯ ಹೈಲೈಟ್.
ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದುದರಿಂದ ಪಾಲಿಕೆ ಮಾಸಿಕ ಸಭೆ ನಡೆದಿರಲಿಲ್ಲ ಇಂದು ಸಭೆ ಪ್ರಾರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ಹಾಗೂ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು ನಂತರ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಪಾಲಿಕೆ ವತಿಯಿಂದ ಸಿಎಂ ಹಾಗೂ ಡಿಸಿಎಂಗೆ ಅಭಿನಂದನೆಸಲ್ಲಿಸಲು ಶೀಘ್ರವೇ ಮೇಯರ್ ಸಂಪತ್‍ರಾಜ್, ಉಪ ಮೇಯರ್ ಪದ್ಮಾವತಿ ನರಸಿಂಹ ಮೂರ್ತಿ, ಆಡಳಿತ ಮತ್ತು ಪ್ರತಿ ಪಕ್ಷದ ನಾಯಕರನ್ನೊಳಗೊಂಡ ನಿಯೋಗ ಭೇಟಿ ಮಾಡಲು ದಿನಾಂಕ ನಿಗದಿ ಪಡಿಸಿ ಹಾಗೂ ಬೆಂಗಳೂರು ನಗರದ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡೋಣ ಎಂದು ಹೇಳಿದರು.

ಬಿಬಿಎಂಪಿ ಯ ಮೂವರು ಸದಸ್ಯರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಅದರಲ್ಲಿ ಕೆಆರ್‍ಪುರ ವಾರ್ಡ್‍ನ ಪೂರ್ಣಿಮಾ ಅವರು ಹಿರಿಯೂರು ಕ್ಷೇತ್ರದಿಂದ ಗೆದಿದ್ದಾರೆ. ಉದಯ ಗರುಡಾಚಾಯರ್ ಅವರು ನೂತನವಾಗಿ ಗೆದ್ದು ಬಂದಿದ್ದಾರೆ ಇವರಿಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್, ಜಮಖಂಡಿ ಶಾಸಕ ಸಿದ್ದುನ್ಯಾಮೆಗೌಡ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಮಾತನಾಡಿದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕರಾದ ಪೂರ್ಣಿಮಾ, ಉದಯ ಗರುಡಾಚಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಅಗಲಿದ ಹಿರಿಯ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪದ್ಮನಾಭರೆಡ್ಡಿ ಅವರು, ಬಿ.ಎನ್.ವಿಜಯ್‍ಕುಮಾರ್ ಅವರು ಬಿಜೆಪಿ ಶಾಸಕರಾಗಿದ್ದರೂ ಕೂಡ ಎಲ್ಲ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಇಂತಹ ಮಹಾನ್ ನಾಯಕನ ಹೆಸರನ್ನು ಯಾವುದಾದರೂ ಬಡಾವಣೆಗೆ ಇಡಬೇಕೆಂದು ಮನವಿ ಮಾಡಿದರು.

ಮೇಯರ್ ಸಂಪತ್‍ರಾಜ್ ಮಾತನಾಡಿ, ಬಿ.ಎನ್.ವಿಜಯಕುಮಾರ್ ಬಿಜೆಪಿ ಶಾಸಕರಾಗಿದ್ದರೂ ಕೂಡ ಎಲ್ಲರೊಂದಿಗೆ ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ನಾನು ಒಮ್ಮೆ ಅಭಿವೃದ್ಧಿ ಕಾರ್ಯ ಪರಿಶೀಲಿಸಲು ಅವರ ಕ್ಷೇತ್ರಕ್ಕೆ ಹೋಗಿದ್ದೆ. ವಿಷಯ ತಿಳಿದು ವಿಜಯಕುಮಾರ್ ಅವರು ಸ್ಥಳಕ್ಕೆ ಬಂದು ನಾನು ಹೇಳದಿದ್ದರೂ ನೀವು ಇಲ್ಲಿಗೆ ಬಂದಿದ್ದೀರಾ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ಇದಕ್ಕೆ ಏನು ಸಹಕಾರ ಬೇಕಾದರೂ ನೀಡುವೆ ಎಂದು ಹೇಳಿ ತಮ್ಮ ದೊಡ್ಡತನ ಪ್ರದರ್ಶಿಸಿದ್ದರು ಎಂದು ಸ್ಮರಿಸಿದರು.

ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್, ಮಾಜಿ ಮೇಯರ್ ಕಟ್ಟೆಸತ್ಯನಾರಾಣ, ಸದಸ್ಯರಾದ ಉಮೇಶ್‍ಶೆಟ್ಟಿ, ಡಾ.ರಾಜು ಮತ್ತಿತರರು ಅಗಲಿದ ನಾಯಕರಿಗೆ ನಮ ಸಲ್ಲಿಸಿ ಅವರ ಗುಣಗಾನ ಮಾಡಿದರು.
ಮೃತರ ಗೌರವಾರ್ಥ ಸಭೆಯಲ್ಲಿ ಸದಸ್ಯರು ಎದ್ದು ನಿಂತು ಎರಡು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ