ಬಿಜೆಪಿ ಬಂದ್‍ಗೆ ಕರೆ ನೀಡಿರುವುದು ಬ್ಲಾಕ್‍ಮೇಲ್ ತಂತ್ರವಾಗಿದೆ – ಐವಾನ್ ಡಿಸೋಜ

ಮಂಗಳೂರು, ಮೇ 28- ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಬಂದ್‍ಗೆ ಕರೆ ನೀಡಿರುವುದು ಬ್ಲಾಕ್‍ಮೇಲ್ ತಂತ್ರವಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜ ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಬಂದ್‍ಗೆ ಕರೆ ನೀಡಿದ್ದರೂ ರೈತರು ಬೀದಿಗಿಳಿದಿಲ್ಲ. ಇದರಿಂದಾಗಿ ಬಿಜೆಪಿ ಬಂದ್ ಕರೆ ಸಂಪೂರ್ಣ ವಿಫಲವಾಗಿದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಇತರ ನಾಯಕರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಬೇಕಿದೆ. ಇದು ಜನತೆಗೆ, ರೈತರಿಗೂ ಅರ್ಥವಾಗಿದೆ. ಆದರೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಏನೂ ಮಾಡಿಲ್ಲ. ವಿರೋಧ ಪಕ್ಷವಾಗಿದ್ದಾಗಲೂ ಏನೂ ಮಾಡದೆ ಇದೀಗ ಸುಮ್ಮನೆ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದೆ ಎಂದು ದೂರಿದರು.
ಸಚಿವ ಸ್ಥಾನದ ಸಿಕ್ಕರೆ ಕೆಲಸ ಮಾಡಲು ಬದ್ಧ
ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐವಾನ್ ಡಿಸೋಜ, ಅವಕಾಶ ಕೊಟ್ಟರೆ ಕೆಲಸ ಮಾಡಲು ಬದ್ಧ. ಎರಡು ವರ್ಷ ವಿಧಾನ ಪರಿಷತ್‍ನ ಮುಖ್ಯ ಸಚೇತಕನಾಗಿ ಕಾರ್ಯನಿರ್ವಹಿಸಿದ ಅನುಭವವೂ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಶೋಕ್ ಡಿ.ಕೆ., ಪುನೀತ್ ಶೆಟ್ಟಿ, ಸಿರಿಲ್ ಡಿಸೋಜ, ಹಬೀಬ್ ಕಣ್ಣೂರು, ಜ್ಞಾನೇಶ್, ಮುದಸ್ಸಿರ್ ಕುದ್ರೋಳಿ, ನಝೀರ್ ಬಜಾಲ್ ಉಪಸ್ಥಿತರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ