ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಲುತ್ತೇವೆ ಎಂಬ ಭಯ ಹುಟ್ಟಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಳ್ಳೇಗಾಲ,ಮೇ.8- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಲುತ್ತೇವೆ ಎಂಬ ಭಯ ಹುಟ್ಟಿದೆ. ಅವರು ನೂರು ಬಾರಿ ಬಂದರೂ, ಸೂರ್ಯ ಪೂರ್ವದ ಕಡೆ ಹುಟ್ಟುವುದು ಎಷ್ಟು ಸತ್ಯವೊ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನ್ಯಾಷನಲ್ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದ ಮೇಲೆ ದಲಿತರ ಮೇಲೆ ದೌರ್ಜನ್ಯ ಶೇ 38 ಹೆಚ್ಚಳವಾಗಿದೆ. ಆದರೆ ಕೇಂದ್ರ ಸರ್ಕಾರದಲ್ಲಿ ಇರುವ ಮಂತ್ರಿ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಿಸುತ್ತೆನೆ ಎಂದು ಹೇಳುತ್ತಾರಲ್ಲ ಅವರು ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಯೋಗ್ಯತೆ ಇಲ್ಲ. ಸಂವಿಧಾನ ಬದಲು ಮಾಡಿದರೆ ದೇಶದಲ್ಲಿ ರಕ್ತ ಪಾತ ಹರಿಯುತ್ತದೆ ಎಂದು ಎಚ್ಚರಿಸಿದರು.
ಅನಂತಕುಮಾರ್ ಹೆಗ್ಡೆಯ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಇವರು ಡೋಂಗಿಗಳು ಹೌದೋ ಅಲ್ಲವೊ ಎಂದು ಪ್ರಶ್ನಿಸಿದರು. ಬಿಜೆಪಿ ಅವರಿಗೆ ಜಾತ್ಯಾತೀತ ತತ್ವದ ಬಗ್ಗೆ ನಂಬಿಕೆ ಇಲ್ಲ ಅವರು ಕೋಮುವಾದಿಗಳು. ವಿಜಯ್ ಮಲ್ಯ, ನೀರವ್ ಮೋದಿ ದೇಶ ಕೊಳ್ಳೆ ಹೊಡೆದು ಹೋಗುವಾಗ ಪ್ರಧಾನಿ ಮೋದಿ ಎಲ್ಲಿ ಹೋಗಿದ್ದರು ಎಂದು ಅವರು ಪ್ರಶ್ನಿಸಿದರು. ದೇಶ ಆಳಲು 56 ಇಂಚಿನ ಎದೆ ಅಲ್ಲ, ವಿಶಾಲವಾದ ಹೃದಯ ಬೇಕು. ಬಾಡಿ ಬಿಲ್ಡರ್ಗೂ ಮೋದಿಯಂತೆ 56 ಇಂಚಿನ ಎದೆ ಇರುತ್ತದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತೈಲ, ಅಡುಗೆ ಅನಿಲ ಬೆಲೆ ಎಷ್ಟಿತ್ತು, ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟಾಗಿದೆ ಇದೆ ಏನು ಅಚ್ಚೆ ದಿನ್, ಮನ್ ಕಿ ಬಾತ್ ಬದಲು ಕಾಮ್ ಕಿ ಬಾತ್ ಹೇಳಿ ಎಂದರು.
ಕೊಳ್ಳೇಗಾಲದ ಜನತೆ ಎ.ಆರ್.ಕೃಷ್ಣಮೂರ್ತಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಪಕ್ಷ ಜಾತಿ- ಜಾತಿ ನಡುವೆ ಬೆಂಕಿ ಹಚ್ಚುವ ಪಕ್ಷ, ಡಾ.ಅಂಬೇಡ್ಕರ್ ಸಾಹೇಬರು ರಚಿಸಿದ ಸಂವಿದಾನ ಬದಲಿಸಲು ಹುನ್ನಾರ ನಡೆಸಿದೆ ದಲಿತರ ಹಕ್ಕುಗಳಿಗೆ ಚ್ಯುತಿ ತರಲು ಹೊರಟಿದ್ದಾರೆ ಆದ್ದರಿಂದ ಮತದಾರರು ಬಿ.ಜೆ.ಪಿ ತಿರಸ್ಕರಿಸಬೇಕು ಬಿ.ಎಸ್.ಬಿ ಅಭ್ಯರ್ಥಿ ಮಹೇಶ್ ಗೆದ್ದರು ಇವರು ರಾಜ್ಯ ಮಟ್ಟದಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಈ ಬಾರಿ ರಾಜ್ಯದಲ್ಲಿ 25 ಸೀಟ್‍ಗೆ ಮಾತ್ರ ಸೀಮಿತ:
ಇದೇ ಸಂದರ್ಭದಲ್ಲಿ ಪ್ರಾಂತಿಯ ಪಕ್ಷ ಜೆ.ಡಿ.ಎಸ್ ಈ ಚುನಾವಣೆಯಲ್ಲಿ 25 ಸೀಟ್ ಬರುವುದು ಕಷ್ಟ. ಬಿ.ಎಸ್.ಪಿ ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿ ಅವರ ಬಗ್ಗೆ ನನಗೆ ಗೌರವ ಇದೆ ಆದರೇ ಕರ್ನಾಟಕದಲ್ಲಿ ಗೆಲ್ಲುವ ಶಕ್ತಿ ಇವರಿಗಿಲ್ಲ ಇಗಾಗಿ ಬಿ.ಎಸ್.ಪಿಗೆ ಮತ ಹಾಕಿದರೆ ಬಿ.ಜೆ.ಪಿಗೆ ಅನುಕೂಲವಾಗುವುದರಿಂದ ಬಿ.ಎಸ್.ಪಿ ಅಭ್ಯರ್ಥಿ ಬದಲು ಕಾಂಗ್ರೇಸ್ ಅಭ್ಯರ್ಥಿಗೆ ಮತಹಾಕಿ ಎಂದರು.
ಸಂಸದ ಆರ್.ಧೃವನಾರಯಾಣ ಮಾತನಾಡಿ, ನುಡಿದಂತೆ ನಮ್ಮ ಸರ್ಕಾರ ನಡೆದಿದೆ ನಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯನವರ 1280 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ರೈತರು ಸೊಸೈಟಿಯಲ್ಲಿ ಮಾಡಿದ್ದ ಸಾಲದಲ್ಲಿ 50 ಸಾವಿರವನ್ನು ಮನ್ನಾ ಮಾಡಿದೆ. 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಪಡೆಯುವಂತೆ ಮಾಡಿದೆ. ಎಸ್‍ಸಿ ಎಸ್‍ಟಿ ಜನಾಂಗಕ್ಕೆ ಅನುದಾನವನ್ನು ಮೀಸಲಿಟ್ಟಿದ್ದಾರೆ. ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ರಾಜ್ಯದ ಪ್ರಗತಿಗೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಕ್ಷೇತ್ರದ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಾನು ತೆಗೆದುಕೊಂಡ ರಾಜಕೀಯ ತೀರ್ಮಾನದಿಂದಾಗಿ ನಾನು 14 ವರ್ಷ ವನವಾಸ ಅನುಭವಿಸಿದ್ದೇನೆ. ನನ್ನ ವನವಾಸದಿಂದ ಮುಕ್ತಿಗೊಳ್ಳಲಲು ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಶಾಸಕ ಜಯಣ್ಣ ಮಾಜಿ ಶಾಸಕ ಎಸ್.ಬಾಲ್‍ರಾಜ್, ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ವಸಂತಿ ಶಿವಣ,್ಣ ಮುಖಂಡರುಗಳಾದ ಕಿನಕನಹಳ್ಳಿ ರಾಚಯ್ಯ, ಡಿಎನ್ ನಟರಾಜ್, ಜಿಲ್ಲಾ ಪಂಚಾಯಿತ್ ಉಪಾಧ್ಯಕ್ಷ ಯೋಗೇಶ್,ಸದಸ್ಯ ಸದಾಶಿವ ಮೂರ್ತಿ ಯೂತ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜ್ ಸೇರಿದಂತೆ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ