ಬಿಸಿಲ ನಾಡಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ: ಈ ಬಾರಿ ಚುನಾವಣೆ ಅಭಿವೃದ್ಧಿ ಹಾಗೂ ಅಭಿವೃದ್ಧಿ ವಿರೋಧಿ ಪಕ್ಷಗಳ ನಡುವಣ ಚುನಾವಣೆ

ರಾಯಚೂರು:ಮೇ-6: ಒಂದು ಕಡೆ ಅಭಿವೃದ್ಧಿಗೆ ಬದ್ಧವಾಗಿರುವ, ಎಲ್ಲರೊಡನೆ ಅಭಿವೃದ್ಧಿ ಎಂದು ಪ್ರತಿಪಾದಿಸುವ ಬಿಜೆಪಿ, ಇನ್ನೊಂದು ಕಡೆ ಅಭಿವೃದ್ಧಿ ವಿರೋಧಿಸುವ, ಸಮಾಜವನ್ನು ಒಡೆಯುವ ಕಾಂಗ್ರೆಸ್ ಇದೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಈ ಎರಡರ ನಡುವಣ ಚುನಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದಅವರು, ರಾಯಚೂರಿನ ಉರಿಬಿಸಿಲಿನಲ್ಲಿ ನಿಂತಿರುವ ನೀವು ಎಸಿ ಕೊಠಡಿಗಳಲ್ಲಿ ಕುಳಿತು ಅತಂತ್ರ ವಿಧಾನಸಭೆ ಎಂದು ಮಾತನಾಡುವವರಿಗೆ ಉತ್ತರಕೊಡ್ತಿದ್ದೀರಿ ಎಂದರು.

ನೀವು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಭಾಷೆಯ ತಡೆ ಇಲ್ಲ. ಒಂದು ಭಾರತ, ಶ್ರೇಷ್ಠ ಭಾರತ. ನಿಮ್ಮ ಪ್ರೀತಿ ಇದನ್ನು ತೋರಿಸುತ್ತಿದೆ. ಅನುವಾದದ ಅಗತ್ಯ ಇಲ್ಲ ಎಂದರು. ನೀವು ನನ್ನ ಮಾಲೀಕರು, ನೀವು ಆಜ್ಞೆ ಮಾಡಿದಿರಿ, ನಾನು ಶಿರಸಾವಹಿಸಿದೆ. (ಜನರಿಂದ ಮೋದಿ ಮೋದಿ ಮೋದಿ ಘೋಷಣೆ) ರಾಯಚೂರು ಹರಿದಾಸರು ಮತ್ತು ವಚನಕಾರರ ಭೂಮಿ. ಅನೇಕ ಸಾಂಸ್ಕೃತಿಕ ಪರಂಪರೆಗಳು ಬೆಳಗಿವೆ. ಇಷ್ಟಾದರೂ ಕಾಂಗ್ರೆಸ್ ಇಲ್ಲಿಂದ ಏನನ್ನೂ ಕಲಿತಿಲ್ಲ. ಈಗ ಕರ್ನಾಟಕ ಅನೇಕರ ಬಲಿದಾನ, ಯೋಗದಾನಗಳಿಂದ ಈ ಸ್ಥಿತಿಗೆ ತಲುಪಿದೆ. ಈ ಚುನಾವಣೆಯಲ್ಲಿ ಯಾರು ಎಂಎಲ್‌ಎ ಆಗ್ತಾರೆ ಅನ್ನುವುದಲ್ಲ. ರಾಜ್ಯದ ಭವಿಷ್ಯ ಏನಾಗುತ್ತೆ ಎನ್ನುವ ನಿರ್ಣಯವಾಗಲಿದೆ ಎಂದರು.

ಒಂದು ಕಡೆ ಅಭಿವೃದ್ಧಿಗೆ ಬದ್ಧವಾಗಿರುವ, ಎಲ್ಲರೊಡನೆ ಅಭಿವೃದ್ಧಿ ಎಂದು ಪ್ರತಿಪಾದಿಸುವ ಬಿಜೆಪಿ, ಇನ್ನೊಂದು ಕಡೆ ಅಭಿವೃದ್ಧಿ ವಿರೋಧಿಸುವ, ಸಮಾಜವನ್ನು ಒಡೆಯುವ ಕಾಂಗ್ರೆಸ್ ಇದೆ. ಇದು ಈ ಎರಡರ ನಡುವಣ ಚುನಾವಣೆಯಾಗಿದೆ. ಜನರನ್ನು ಒಡೆಯುವ, ಅಣ್ಣತಮ್ಮಂದಿರಲ್ಲಿ ಸಂಘರ್ಷ ಸೃಷ್ಟಿಸುವ ತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಐದು ವರ್ಷಗಳಿಂದ ಏನು ಮಾಡದ ಕಾಂಗ್ರೆಸ್ ಈಗ ಆರೋಪಗಳ ಮೇಲೆ ಆರೋಪ ಮಾಡುತ್ತಿದೆ. ಐದು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತ ಅದರ ದಿಲ್ಲಿ-ಗಲ್ಲಿ ನಾಯಕರು ಹೇಳಲಿ.

ಕಾಂಗ್ರೆಸ್‌ ಹಗಲು ರಾತ್ರಿ ಮೋದಿ ಮೋದಿ ಅನ್ನುತ್ತೆ, ಮೋದಿಗೆ ಬೈಯುವುದೇ ಅವರ ಕಾರ್ಯತಂತ್ರವೇ? ಕಾಂಗ್ರೆಸ್‌ಗೆ ವಿದಾಯ ಹೇಳಲು ಇದು ಶುಭ ಸಮಯ. ದೇಶದ ಜನರು ವಿದಾಯ ಹೇಳಿದ್ದಾರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ತ್ರಿಪುರ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಘಡದಲ್ಲಿ ಕಾಂಗ್ರೆಸ್ ಸೋತಿದೆ. ಇಲ್ಲೂ ಸೋಲುತ್ತೆ ಎಂಬ ವಿಶ್ವಾಸವಿದೆ ಎಂದರು.

ಒಂದೆಡೆ ಬಿಜೆಪಿ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಭ್ರಷ್ಟರಿಗೆ ಸಹಾಯ ಮಾಡುತ್ತಿದೆ. ಬಿಜೆಪಿ ಜನರ ದನಿಗಳಿಗೆ ದನಿಯಾಗುವ ಉದ್ದೇಶವನ್ನು ಹೊಂದಿದೆ, ಕಾಂಗ್ರೆಸ್ ಜನರ ದನಿಯನ್ನು ಹತ್ತಿಕ್ಕುವ ಗುರಿಯನ್ನು ಹೊಂದಿದೆ. 400 ಲೋಕಸಭಾ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಇದೀಗ 40ಕ್ಕೆ ಬಂದು ನಿಂತಿದೆ. ಅಷ್ಟೇ ಅಲ್ಲ 22 ರಾಜ್ಯಗಳಿಂದ ಕಾಂಗ್ರೆಸ್ ದೂರಾಗಿದೆ. ಹಸಿದವರಿಗೆ ಅನ್ನ ನೀಡುತ್ತೇವೆಂದು ಇಲ್ಲಿನ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಒಳ್ಳೆಯದೇ ಆಧರೆ, ಅದರಲ್ಲಿ ಕೇಂದ್ರ ಸರ್ಕಾರದ ಹಣವೂ ಇದೆ ಎಂಬುದನ್ನು ಸರ್ಕಾರ ಮುಚ್ಚಿಡುತ್ತಿದೆ.

ಆಧಾರ್ ಲಿಂಗ್ ನ ನಂತರ ಒಂದೂವರೆ ಕೋಟಿಗೂ ಹೆಚ್ಚು ಅಕ್ರಮ ಹೆಸರುಗಳು ಹೊರಗೆ ಬಂದವು. ಅಸ್ತಿತ್ವದಲ್ಲಿ ಇಲ್ಲದ ಒಂದೂವರೆ ಕೋಟಿಗೂ ಹೆಚ್ಚು ಜನರಿಗೆ ಅಕ್ಕಿ ಹೋಗುತ್ತಿತ್ತು. ಅದನ್ನೆಲ್ಲಾ ನಾವು ಬಂದ್ ಮಾಡಿಬಿಟ್ಟಿದ್ದೇವೆ. ಫಲಾನುಭವಿಗಳಿಗೆ ನಾವು ನೋರವಾಗಿ ಯೋಜನೆಗಳನ್ನು ತಲುಪಿಸುತ್ತಿದ್ದೇವೆ.

ರಾಯಚೂರಿನ ಸೋನಾ ಮಸೂರಿ ಅಕ್ಕಿಗೆ ತನ್ನದಾ ಆದ ಪ್ರಖ್ಯಾತಿ ಇದೆ. ಆದರೆ, ಇಲ್ಲಿನ ರೈತರು ನೀರಿಗಾಗಿ ಒದ್ದಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ನೀರಿನ ವಿಷಯದಲ್ಲಿ ಹಣ ಮಾಡುವುದನ್ನು ಕಲಿತಿದ್ದಾರೆ. ಕೃಷ್ಣ-ತುಂಗಭದ್ರೆ ಇದ್ದರೂ ಇಲ್ಲಿನ ರೈತರಿಗೆ ನೀರಿಲ್ಲ. ಎಂದು ಗುಡುಗಿದರು.

Karnataka assembly election,Raichur,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ