ಕುತೂಹಲಕ್ಕೆ ಕಾರಣವಾಯ್ತು ಪ್ರಧಾನಿ ಮೋದಿಯಿಂದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಶ್ಲಾಘನೆ…

ಬೆಂಗಳೂರು:ಮೇ-1:ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಉಡುಪಿಯಲ್ಲಿ ಬಿಜೆಪಿ ಬಹಿರಂಗ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ತೀವ್ರ ವಗದಾಳಿ ನಡೆಸಿ, ಇದೇ ವೇಳೆ ಜೆಡಿಎಸ್ ಪರ ಮೃದು ಧೋರಣೆ ತಾಳಿದ್ದು, ಹೆಚ್ ಡಿ ದೇವೇಗೌಡರನ್ನು ಹಾಡಿ ಹೊಗಳಿರುವುದು ಕುತೂಹಲದ ಜತೆಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಚುನಾವಣೆ ವೇಳೆ ಮೋದಿಯವರು ದೇವೇಗೌಡರನ್ನ ಹೊಗಳಿರುವ ಹಿಂದೆ ಚುನಾವಣೆ ಗಿಮಿಕ್‌ ಇರಬಹುದೇ ಎಂಬ ಅನುಮಾನ ಕೂಡ ಆರಂಭವಾಗಿದೆ. ಬಿಜೆಪಿ-ಜೆಡಿಎಸ್‌ ನಡುವೆ ಒಳ ಒಪ್ಪಂದ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿಯವರ ಈ ನಡೆ ಕುತೂಹಲ ಇಮ್ಮಡಿಗೊಳಿಸಿದೆ.

ಒಂದು ವೇಳೆ ಚುನಾವಣೆ ಫಲಿತಾಂಶ ಅತಂತ್ರವಾದರೆ ಬಿಜೆಪಿ, ಜೆಡಿಎಸ್‌ ಜತೆ ಸೇರಿ ಸರ್ಕಾರ ರಚನೆ ಮಾಡುವ ಇರಾದೆ ಅಲ್ಲಗಳೆಯುವಂತಿಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಈಗಾಗಲೇ ದೇವೇಗೌಡರು ಯಾವುದೇ ಕಾರಣಕ್ಕೂ ನಾವೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಮಾತಿದೆ. ಈ ನಿಟ್ಟಿನಲ್ಲಿ ದೇವೇಗೌಡರನ್ನು ಮೋದಿಯವರು ಶ್ಲಾಘಿಸಿದ್ದರ ಹಿಂದಿನ ಮರ್ಮವೇನು ಎಂಬುದು ಚುನಾವಣೆ ಬಳಿಕ ಗೊತ್ತಾಗಲಿದೆ.

karnataka assembly election,Udupi,PM narendra modi,H D Devgowda

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ