ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ: ಆದರೆ ಕೇಂದ್ರ ಸರ್ಕಾರದಿಂದ ಈ ಕ್ಷೇತ್ರದಲ್ಲಿ ಸಾಧನೆ ಶೂನ್ಯ: ಕಾಂಗ್ರೆಸ್ ಮುಖಂಡ ಸ್ಯಾಮ್ ಪಿಟ್ರೋಡ

ಬೆಂಗಳೂರು,ಏ.30- ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೆ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಯಾವ ಸಾಧನೆಯನ್ನೂ ಮಾಡದೆ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸ್ಯಾಮ್ ಪಿಟ್ರೋಡ ಟೀಕಿಸಿದರು.

ಬೆಳಗ್ಗೆ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ 150 ಶತಕೋಟಿ ಡಾಲರ್ ಮೊತ್ತದ ಸಾಫ್ಟ್‍ವೇರ್‍ನ್ನು ರಫ್ತು ಮಾಡುತ್ತಿದೆ. ಕಳೆದ ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರ ಯಾವ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಐಟಿ ಯೋಜನೆಗಳನ್ನು ಸ್ಥಾಪಿಸಿದೆ. ಎಷ್ಟು ಬಂಡವಾಳ ಹೂಡಿಕೆಯಾಗಿದೆ, ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಬ್ರ್ಯಾಂಡ್ ಆಗಿದೆ. ಮಹಾತ್ಮಗಾಂಧೀಜಿ ಅವರು ತಮ್ಮ ಕೆಲಸದ ಮೂಲಕವೇ ಪ್ರಖ್ಯಾತಿ ಗಳಿಸಿದವರು. ಅದರಂತೆ ಬೆಂಗಳೂರು ತನ್ನ ಪ್ರಗತಿ ಹಾಗೂ ಅಭಿವೃದ್ಧಿಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ 2ನೇ ಸಿಲಿಕಾನ್ ವ್ಯಾಲಿ ಎಂದು ಹೆಸರು ಮಾಡಿದೆ. ಬ್ರ್ಯಾಂಡ್ ಬೆಂಗಳೂರಿಗಾಗಿ ಯಾವುದೇ ಖಾಸಗಿ ಪಿ.ಆರ್. ಸಂಸ್ಥೆಯ ನೆರವಿನ ಅಗತ್ಯ ಇಲ್ಲ. ಕಾಂಗ್ರೆಸ್ ಆ ರೀತಿಯ ಅಗ್ಗದ ಪ್ರಚಾರದ ಬೆನ್ನು ಬೀಳುವುದಿಲ್ಲ ಎಂದು ಅವರು ಹೇಳಿದರು.

ಸುಮಾರು 30 ಮಿಲಿಯನ್ ಭಾರತೀಯರು ದೇಶದಲ್ಲಿ ನೆಲೆಸಿದ್ದಾರೆ. ಅವರ ನಾಲ್ಕು ಮಿಲಿಯನ್ ಮಂದಿ ಅಮೆರಿಕದಲ್ಲೇ ಇದ್ದಾರೆ. ಅವರು ವಿದೇಶದಲ್ಲಿದ್ದರೂ ಕೂಡ ಭಾರತದ ಜೊತೆ ವಿಕಟ ಸಂಪರ್ಕ ಹೊಂದಿದ್ದಾರೆ. ಇಂದು ಅನಿವಾಸಿ ಭಾರತೀಯರನ್ನು ಬೆಂಗಳೂರಿನಲ್ಲಿ ನಾನು ಭೇಟಿಯಾಗಿದ್ದೆ. ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇವೆ. ಎಲ್ಲರೂ ಕಾಂಗ್ರೆಸ್‍ನ ತತ್ವ ಸಿದ್ದಾಂತಕ್ಕೆ ಪ್ರಭಾವಿತರಾಗಿದ್ದಾರೆ. ಪಕ್ಷಕ್ಕೆ ಬೆಂಬಲ ನೀಡಲು ಸಿದ್ದರಿದ್ದಾರೆ ಎಂದರು.

ಬೆಂಗಳೂರು ಇಂದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಲು ಐಟಿ ಉದ್ಯಮ ಪ್ರಮುಖ ಕಾರಣ. 90ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರ ಸಿಡಾಟ್ ಯೋಜನೆ ಮೂಲಕ ಐಟಿ ಉದ್ಯಮದ ಅಭಿವೃದ್ದಿಗೆ ನೀಲನಕ್ಷೆ ರೂಪಿಸಿದ್ದು, ಆ ಮೂಲಕ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣವಾಯಿತು. ಇಂದು ಬೆಂಗಳೂರು ಅಂತಾರಾಷ್ಟ್ರೀಯ ಖ್ಯಾತಿಗೆ ಕಾರಣವಾಗಿದೆ.

ಯಾವುದೇ ದೇಶಕ್ಕೋದರು ಬೆಂಗಳೂರನ್ನು ಐಟಿ ವಲಯದಿಂದ ಗುರುತಿಸುತ್ತಾರೆ. ಭವಿಷ್ಯದಲ್ಲಿ ಕರ್ನಾಟಕವನ್ನು ಇನ್ನಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲು ಕಾಂಗ್ರೆಸ್ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ಪ್ರಣಾಳಿಕೆ ರಾಜ್ಯದ, ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಸ್ಯಾಮ್ ಪಿಟ್ರೋಡ ಹೇಳಿದರು.
ಬೆಂಗಳೂರು ಬುದ್ದಿವಂತರ ನಾಡು. ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಇಸ್ರೋ ಸೇರಿದಂತೆ ಪ್ರಮುಖ ಸಂಸ್ಥೆಗಳಿವೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ವತಿಯಿಂದ ಅನಿವಾಸಿ ಭಾರತೀಯರ ಘಟಕ ಆರಂಭಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸಲಹೆ ನೀಡಿದ್ದೇನೆ ಅವರು ಸಮ್ಮತಿಸಿದ್ದಾರೆ ಎಂದು ಪ್ರಕಟಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧು ಯಕ್ಷಿ ಗೌಡ್ ಮಾತನಾಡಿ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ದಿಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಂದು ಲಕ್ಷ ಕೋಟಿ ಅನುದಾನ ಕಾಯ್ದಿರಿಸುವ ಭರವಸೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಕೇಂದ್ರ ಸರ್ಕಾರ ಅನಿವಾಸಿ ಭಾರತೀಯರಿಗೆ ವೀಸಾ ಆನ್‍ಲೈನ್ , ವೀಸಾ ಆನ್‍ಲೈನ್ ಅರೈವಲ್ ಯೋಜನೆಯ ಭರವಸೆ ನೀಡಿತ್ತು. ಆದರೆ ಆನ್‍ಲೈನ್‍ನಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದರೆ.

ಇಮೇಲ್ ಅಪ್ರುವಲ್ ಮಾತ್ರ ಸಿಗುತ್ತಿದೆ. ಆನ್‍ಲೈನ್ ವೀಸಾ ಸಿಗುತ್ತಿಲ್ಲ.ಕೇಂದ್ರ ಸರ್ಕಾರ ಇಂಥ ಸುಳ್ಳು ಭರವಸೆಗಳನ್ನು ನೀಡಿ ವಂಚಿಸುತ್ತಿದೆ ಎಂದು ಆರೋಪಿಸಿದರು.
ಅನಿವಾಸಿ ಭಾರತೀಯರ ಘಟಕದ ಉಪಾಧ್ಯಕ್ಷೆ ಆರತಿ ಕೃಷ್ಣ ಮಾತನಾಡಿ, ಸೌತ್ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯರು ಭಾರತಕ್ಕೆ ವಾಪಸ್ ಬಂದು ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ತೋರಿಸುತ್ತಿದ್ದು, ಅವರಿಗೆ ನೆರವಾಗಲು ಪ್ರಣಾಳಿಕೆಯಲ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಉಪಾಧ್ಯಕ್ಷ ಪೆÇ್ರ.ರಾಧಾಕೃಷ್ಣ , ಓವರ್‍ಸೀಸ್ ಕಾಂಗ್ರೆಸ್‍ನ ಕರ್ನಾಟಕ ಅಧ್ಯಕ್ಷ ಡಾ.ದಯಾನಾಯಕ್, ಹರಭಜನ್‍ಸಿಂಗ್, ಮೊಯಿಂದರ್ ಸಿಂಗ್, ಕೃಷ್ಣ ಚೈತನ್ಯ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ