ಉಮಾಕಾಂತ ನಾಗಮಾರಪಳ್ಳಿ ಮತಯಾಚನೆ ತಮ್ಮನ ಪರ ಅಣ್ಣನ ಪ್ರಚಾರ

ಬೀದರ್, ಏ. 30- ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಪರವಾಗಿ ಸಹೋದರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಸೋಮವಾರ ಚಿಕ್ಕಪೇಟ್‍ನಲ್ಲಿ ಮತಯಾಚಿಸಿದ ಉಮಾಕಾಂತ ನಾಗಮಾರಪಳ್ಳಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳ, ಎಲ್ಲ ವರ್ಗಗಳ, ಮಹಿಳೆಯರ ಅಭಿವೃದ್ಧಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಿ ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸುವಂತೆ ಮನವಿ ಮಾಡುತ್ತಿದ್ದಾರೆ.

ಈ ಹಿಂದೆ ತಂದೆಯವರಾದ ದಿ. ಗುರುಪಾದಪ್ಪ ನಾಗಮಾರಪಳ್ಳಿಗೆ ಆಶೀರ್ವದಿಸಿ ಗೆಲ್ಲಿಸಿದ್ದಿರಿ. ಇದೀಗ ಸಹೋದರ ಸೂರ್ಯಕಾಂತ ಕಣದಲ್ಲಿದ್ದು, ಎಲ್ಲ ಸಮುದಾಯದ ಜನ ಬೆಂಬಲಿಸಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿದರು. ಪ್ರಮುಖರಾದ ಬಾಲಾಜಿ ಚವ್ಹಾಣ್, ಡಾ.ರಜನೀಶ್ ವಾಲಿ, ಭೀಮರಾವ ಪಾಟೀಲ್ ಡಿಗ್ಗಿ, ಜಯಕುಮಾರ ಕಾಂಗೆ, ಉಪೇಂದ್ರ ದೇಶಪಾಂಡೆ, ವಿಜಯಕುಮಾರ ಪಾಟೀಲ್ ಗಾದಗಿ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ