ಕರಾವಳಿಯಲ್ಲಿ ರಾಹುಲ್ ಗಾಂಧಿ ಮಿಂಚಿನ ಪ್ರಚಾರ

ಬೆಂಗಳೂರು, ಏ.26- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿಂಚಿನ ಪ್ರಚಾರ ನಡೆಸಿ, ವಿಧಾನಸಭೆ ಚುನಾವಣೆಯ ರಣಾಂಗಣಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.
ಎರಡು ದಿನಗಳ ರಾಜ್ಯಪ್ರವಾಸಕ್ಕಾಗಿ ಇಂದು ಬೆಳಗ್ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವಾರು ನಾಯಕರು ಸ್ವಾಗತಿಸಿದರು.

ನಂತರ ರಾಹುಲ್ ಅಲ್ಲಿಂದ ಹೆಲಿಕಾಪ್ಟರ್‍ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಂಕೋಲಕ್ಕೆ ತೆರಳಿದರು.
ಅಲ್ಲಿ ಜೈ ಹಿಂದ್ ಶಾಲಾ ಮೈದಾನದಲ್ಲಿಳಿದು ಅಲ್ಲಿಂದ ಪುರಸಭಾ ಕಚೇರಿ, ಬಡಿಕಟ್ಟ ರಸ್ತೆ, ಗಣಪತಿ ರಸ್ತೆಗಳಲ್ಲಿ, ಕಾಮತ್ ಹೋಟೆಲ್ ಮಾರ್ಗವಾಗಿ ರೋಡ್ ಶೋ ನಡೆಸಿ ನಂತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಸ್ತೆ ಮಾರ್ಗವಾಗಿ ಕುಮಟಾಕ್ಕೆ ತೆರಳಿದ ರಾಹುಲ್ ಗಾಂಧಿ ಮಸ್ತಿಕಟ್ಟೆ ವೃತ್ತದಿಂದ ಗಿಬ್ಬ ಹೈಸ್ಕೂಲ್ ವೃತ್ತದವರೆಗೂ ರೋಡ್ ಶೋ ನಡೆಸಿದರು. ಕುಮುಟಾದಲ್ಲಿ ಬಹಿರಂಗಸಭೆ ನಡೆಸಿದರು.

ನಂತರ ಹೊನ್ನಾವರದಲ್ಲಿ ರೋಡ್ ಶೋ ನಡೆಸಿ, ಸರಸ್ವತಿ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಭಟ್ಕಳದಲ್ಲೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪಕ್ಷದ ನಾಯಕರೊಂದಿಗೆಸಮಾಲೋಚನೆ ನಡೆಸಿದರು.
ರಾತ್ರಿ ಭಟ್ಕಳದ ಮುರಡೇಶ್ವರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ಐದು ಹಂತದಲ್ಲಿ ರಾಜ್ಯ ಪ್ರವಾಸ ಮಾಡಿರುವ ರಾಹುಲ್‍ಜನಾರ್ಶೀವಾದ ರ್ಯಾಲಿ ಮೂಲಕ ಬಹುತೇಕ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿದ್ದು, ಭೇಟಿ ನೀಡದ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ತೆರಳಿ ಪ್ರಚಾರ ನಡೆಸಲಿದ್ದಾರೆ.
ಚುನಾವಣೆ ಘೋಷಣೆಯಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪ್ರಕಟಿಸಿ ನಾಮಪತ್ರ ಸಲ್ಲಿಕೆ ನಂತರ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಚುನಾವಣಾ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ಹಲವಾರು ನಾಯಕರು ಹಲವಾರು ದಿನಗಳಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ.
ಪಕ್ಷದ ಗೆಲುವಿಗೆ ಸ್ಟಾರ್ ಕ್ಯಾಂಪೇನರ್‍ಗಳು ರಾಜ್ಯಾದ್ಯಂತ ಪ್ರವಾಸ ಆರಂಭಿಸಬೇಕಿದ್ದು, ಅದಕ್ಕೆ ರಾಹುಲ್‍ಗಾಂಧಿ ಚಾಲನೆ ನೀಡಿದ್ದಾರೆ.ಉತ್ತರ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮಪ್ರದೇಶವಾಗಿದ್ದು , ರಾಹುಲ್ ಗಾಂಧಿ ಬಿಜೆಪಿ, ಆರ್‍ಎಸ್‍ಎಸ್‍ನ್ನು ಕಟುವಾಗಿ ಟೀಕಿಸಿ ಕೋಮುವಾದಿಗಳನ್ನು ಹತ್ತಿಕ್ಕುವಂತೆ ಕಾಂಗ್ರೆಸಿಗರಿಗೆ ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ