ರಾಜ್ಯ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲಿ ಸ್ಥಾಪಿಸಿದ ಕಾಗೊಡು ತಿಮ್ಮಪ್ಪ: 13 ಬಾರಿ ನಾಮಪತ್ರ ಸಲ್ಲಿಕೆ

ಬೆಂಗಳೂರು- ಹಿರಿಯ ರಾಜಕಾರಣಿ ಕಾಗೊಡು ತಿಮ್ಮಪ್ಪ ಸೋಮವಾರ ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಅವರು ರಾಜ್ಯ ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ.

1980ರ ಲೆಜಿಸ್ಲೇಟಿವ್ ಕೌನ್ಸಿಲ್ ಚುನಾವಣೆಗೆ ಸೇರಿದಂತೆ ಕಾಗೊಡು ಇದು 13ನೇ ಬಾರಿಗೆ ನಾಮಪತ್ರ ಸಲ್ಲಿಸಿಸ್ದ್ದಾರೆ. ಸ್ವಾತಂತ್ರಾನಂತರ ಕರ್ನಾಟಕದಲ್ಲಿ ಇದುವರೆಗೆ 14 ಚುನಾವಣೆಗಳು ನಡೆದಿವೆ. 2018ರ ವಿಧಾನಸಭೆ ಚುನಾವಣೆ 15ನೇ ಚುನಾವಣೆಯಾಗಿದೆ. ಕಾನೂನು ವಿದ್ಯಾರ್ಥಿಯಾಗಿದ್ದ ತಿಮ್ಮಪ್ಪ 1950ರಲ್ಲಿ ಕಾಗೋಡು ಹೋರಾಟ ಉತ್ತುಂಗದಲ್ಲಿದ್ದಾಗ ತಾವು ಆ ಹೋರಾಟಕ್ಕೆ ಧುಮುಕಿದ್ದರು.

ತಿಮ್ಮಪ್ಪ ಸೋಷಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ಪ್ರವೇಶ ಗಿಟ್ಟಿಸಿದ್ದರು. 1962ರಲ್ಲಿ ಕ್‍ಂಗ್ರೆಸ್ ನ ಲಕ್ಷ್ಮಿ ಕಾಶಪ್ಪ ಅವರ ವಿರುದ್ಧ ಕಾಗೋಡು ತಿಮ್ಮಪ್ಪ ಸಾಗರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಕಾಗೋಡು ಅವರಿಗೆ 3,299 ಮತಗಳ ಅಂತರದ ಸೋಲುಂಟಾಗಿತ್ತು.1967 ರಲ್ಲಿ ನಡೆದ ಚುನಾವಣೆಯಲ್ಲಿ ಸಹ ಐಎನ್ ಸಿ ಯ ಕೆ.ಎಚ್. ಶ್ರೀನಿವಾಸ್ ಅವರ ವಿರುದ್ಧ ಸ್ಪರ್ಧೆಗಿಳಿದಿದ್ದ ಕಾಗೋಡು ಅವರಿಗೆ 749 ಮತಗಳ ಅಂತರದಿಂದ ಪರಾಜಯ ಲಭಿಸಿತ್ತು.

ಆದರೆ 1972ರಲ್ಲಿ ಐಎನ್ ಸಿ ನ ಅಭ್ಯರ್ಥಿ ಎಲ್ ಟಿ ತಿಮ್ಮಪ್ಪ ಹೆಗಡೆ ಅವರನ್ನು ಸೋಲಿಸಿದ ಸೋಷಿಯಲಿಸ್ಟ್ ಪಕ್ಷದ ಕಾಗೋಡು ತಿಮ್ಮಪ್ಪ ಇದೇ ಪ್ರಥಮ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಮುಂದೆ 1978ರಲ್ಲಿ ಜನತಾ ಪಕ್ಷದ ಟಿಕೆಟ್ ಪಡೆದ ಕಾಗೋಡು ಚುನಾವಣೆಯಲ್ಲಿ ಹೆಗ್ಡೆ ವಿರುದ್ಧ ಪರಾಜ್ಜಿತರಾಗಿದ್ದರು.

ದೇವರಾಜ ಅರಸ್ ಪ್ರಭಾವದಿಂದ ಕಾಂಗ್ರೆಸ್ ಸೇರಿದ ತಿಮ್ಮಪ್ಪ ಅವರ ಭೂ ಸುಧಾರಣೆ ಕ್ರಮಗಳು ಹೆಚ್ಚು ಜನಪ್ರಿಯಗೊಂಡಿದ್ದವು. ಮುಂದೆ ಗುಂಡೂ ರಾವ್ ಸಂಪುಟದಲ್ಲಿ ತಿಮ್ಮಪ್ಪ ಸಚಿವ ಸ್ಥಾನ ಪಡೆದುಕೊಳ್ಳುವುದರಲ್ಲಿ ಸಫಲರಾದರು. ಕಾಂಗ್ರೆಸ್ ತೊರೆದ ಎಸ್. ಬಂಗಾರಪ್ಪ ಕರ್ನಾಟಕ ಕ್ರಾಂತಿ ರಂಗ ಪಕ್ಷದಿಂದ ಸೊರಬ ವಿಧಾನಸಭೆಗೆಗ್ ಸ್ಪರ್ಧಿಸಿದ್ದರು.

ಆ ವೇಳೆ ಕಾಂಗ್ರೆಸ್ ನಲ್ಲಿದ್ದ ತಿಮ್ಮಪ್ಪನನ್ನು ಗುಂಡೂ ರಾವ್ ಸೊರಬದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದ್ದರು. ಆದರೆ ಬಂಗಾರಪ್ಪ ಅವರ ವಿರುದ್ಧ ತಿಮ್ಮಪ್ಪ ಸೋಲನುಭವಿಸಿದರು. ಬಂಗಾರಪ್ಪ – ಕಾಗೋಡು ತಿಮ್ಮಪ್ಪ ಎಸ್. ಬಂಗಾರಪ್ಪ ಹಾಗೂ ಕಾಗೋಡು ಅವರಿಗೆ ಮೊದಲಿಂದ ಬದ್ದ ವೈರವಿತ್ತು.
ಬಂಗಾರಪ್ಪ ಕಾಂಗ್ರೆಸ್ ನಲ್ಲಿದ್ದಾಗ ತಿಮ್ಮಪ್ಪ ಅವರನ್ನು ಬೆಳೆಯಲು ಬಿಡುತ್ತಿರಲಿಲ್ಲ. 1994ರಲ್ಲಿ ಕಾಂಗ್ರೆಸ್ ತೊರೆದ ಬಂಗಾರಪ್ಪ ಕಾಗೋಡು ವಿರುದ್ದ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದರು. ಆದರೆ ಸಾಗರ ಕ್ಷೇತ್ರದ ಕಾಂಗ್ರೆಸ್ ನಾಯಕ ಕಾಗೋಡು ಭಾರೀ ಅಂತರದ ಜಯ ಗಳಿಸಿದರೆ ಬಂಗಾರಪ್ಪ ಮಾತ್ರ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. 2004 ರಲ್ಲಿ ಬಿಜೆಪಿ ಸೇರಿದ್ದ ಬಂಗಾರಪ್ಪ ಅವರ ವಿರುದ್ಧ ಸೆಣೆಸಲು ತಿಮ್ಮಪ್ಪ ಬೆಂಬಲಿಗ, ಸಂಬಂಧಿಯೂ ಆಗಿದ್ದ ಬೇಳೂರು ಗೋಪಾಲಕೃಷ್ಣರನ್ನು ಮುಂದೆ ತಂದರು.

ಆದರೆ ಬಂಗಾರಪ್ಪ ಅವರ ವರ್ಚಸ್ಸಿನೆದುರು ಬೇಳೂರು ಸೋಲಬೇಕಾಯಿತು. ಹೀಗೆ ಸಮಸ್ಯೆಗಳ ನಡುವೆಯೇ ಬೆಳೆದ ಕಾಗೋಡು ತಿಮ್ಮಪ್ಪ ಯುಪಿಎ ಜಾರಿಗೊಳಿಸಿದ ಅರಣ್ಯ ಹಕ್ಕುಗಳ ಕಾಯ್ದೆಗೆ ಹೊಳಪು ನೀಡಿದ್ದರು. 2013 ರ ಚುನಾವಣೆಯಲ್ಲಿ ಗೆದ್ದು ಶಾಸಕ, ವಿಧಾನ ಸಭೆ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಇದೀಗ ಮತ್ತೆ ಸಾಗರದ ಸರದಾರನಾಗಲು ಆಶಿಸಿ ನಾಮಪತ್ರ ಸಲ್ಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ