ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮರಿಸ್ವಾಮಿಗೆ ಬಿಜೆಪಿ ಟಿಕೆಟ್

ಬೆಂಗಳೂರು, ಏ.22-ಗೊಂದಲದ ಗೂಡಾಗಿ ಪರಿಣಮಿಸಿದ್ದ ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪರಮಾಪ್ತ ಮರಿಸ್ವಾಮಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.

ಈ ಹಿಂದೆ ಎರಡನೇ ಪಟ್ಟಿಯಲ್ಲಿ ಅರಸೀಕೆರೆಯಿಂದ ಮಾಜಿ ಸಚಿವ ವಿ.ಸೋಮಣ್ಣನವರ ಪುತ್ರ ಡಾ.ಅರುಣ್ ಸೋಮಣ್ಣನವರಿಗೆ ಟಿಕೆಟ್ ನೀಡಲಾಗಿತ್ತು.

ಆದರೆ ಕೊನೆ ಕ್ಷಣದಲ್ಲಿ ತಮಗೆ ಟಿಕೆಟ್ ನೀಡದೇ ಇರುವುದರಿಂದ ಮುನಿಸಿಕೊಂಡಿರುವ ಅರುಣ್ ಸೋಮಣ್ಣ ಸ್ಪರ್ಧಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಟಿಕೆಟ್ ಘೋಷಣೆಯಾಗಿ ನಾಲ್ಕು ದಿನವಾದರೂ ಅವರು ಬಿ ಫಾರಂ ಪಡೆದಿರಲಿಲ್ಲ. ಸಮಯ ಬರಲಿ ತೆಗೆದುಕೊಳ್ಳುತ್ತೇನೆ ಎಂದು ಸಬೂಬು ಹೇಳಿದ್ದರು.

ಮಂಗಳವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ನಾಳೆ ಮರಿಸ್ವಾಮಿಗೆ ಟಿಕೆಟ್ ನೀಡಿ ನಾಮಪತ್ರ ಸಲ್ಲಿಸಲು ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಯಡಿಯೂರಪ್ಪ ಮರಿಸ್ವಾಮಿ ಜೊತೆ ಮಾತುಕತೆ ನಡೆಸಿದ್ದು, ಮರಿಸ್ವಾಮಿ ಸ್ಪರ್ಧೆಗೆ ಒಲವು ತೋರಿದ್ದಾರೆ.

ನಾಳೆ ಯಡಿಯೂರಪ್ಪ ಅವರಿಗೆ ಬಿ ಫಾರಂ ನೀಡಲಿದ್ದು, ನಂತರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬರಲಿದೆ. ಕೊನೆಯ ಕ್ಷಣದವರೆಗೂ ಅರುಣ್ ಸೋಮಣ್ಣಗೆ ಟಿಕೆಟ್ ನೀಡುವ ಪ್ರಯತ್ನವನ್ನು ಪಕ್ಷದ ವರಿಷ್ಠರು ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ