ಆನೇಕಲ್ ಶಾಸಕ ಬಿ.ಶಿವಣ್ಣ ಅವರ ನಿವಾಸದ ಮೇಲೆ ದಿಢೀರ್ ಐಟಿ ದಾಳಿ:

ಆನೇಕಲ್, ಏ.16- ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಶಾಸಕರು ಸೇರಿದಂತೆ ಕೆಲ ಕೈ ಮುಖಂಡರ ನಿವಾಸಗಳ ಮೇಲೆ ದಿಢೀರ್ ಐಟಿ ದಾಳಿ ನಡೆದಿದೆ.
ಆನೇಕಲ್ ಶಾಸಕ ಬಿ.ಶಿವಣ್ಣ ಅವರ ನಿವಾಸದ ಮೇಲೆ ಇಂದು ಬೆಳಿಗ್ಗೆ ಏಕಾಏಕಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಚಂದಾಪುರ ಆನೇಕಲ್ ರಸ್ತೆಯ ಸೂರ್ಯಸಿಟಿಯಲ್ಲಿರುವ ಶಾಸಕ ಶಿವಣ್ಣ ಅವರ ಮನೆ ಹಾಗೂ ಅಕ್ಕಪಕ್ಕದಲ್ಲಿರುವ ಅವರ ಆಪ್ತರ ಎರಡು ಮನೆಗಳ ವೆÅೀಲೂ ಐಟಿ ದಾಳಿ ನಡೆದಿದೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದಿಂದ ಸ್ಪರ್ಧಿಸಲು ಶಿವಣ್ಣ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೇ ಐಟಿ ದಾಳಿ ನಡೆದಿದೆ.
ಅದೇ ರೀತಿ ಚಿಕ್ಕಮಗಳೂರಿನಲ್ಲೂ ಕೆಲ ಕಾಂಗ್ರೆಸ್ ಮುಖಂಡರುಗಳ ಮೇಲೆ ಐಟಿ ದಾಳಿ ನಡೆದಿದೆ.
ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸುಧೀರ್‍ಕುಮಾರ್ ಮುರಳಿ, ಮುಖಂಡರಾದ ಸುಬ್ರಹ್ಮಣ್ಯಶೆಟ್ಟಿ, ಸತೀಶ್ ಅವರ ಕೊಪ್ಪದ ತಿಲಕ್ ನಗರದಲ್ಲಿರುವ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ.
ಜಿಲ್ಲೆಯ ಪ್ರಭಾವ ಹೊಂದಿರುವ ಮೂವರು ಕಾಂಗ್ರೆಸ್ ಮುಖಂಡರುಗಳ ಮನೆಯಿಂದ ಹಲವಾರು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.
ಸೋಲಿನ ಭೀತಿಯಿಂದ ಬಿಜೆಪಿಯವರು ಐಟಿ ಅಸ್ತ್ರ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ