ಟಿಕೆಟ್ ಪ್ರಕಟಗೊಳ್ಳುವ ಮೊದಲೇ ಕಾಂಗ್ರೆಸ್‍ನಲ್ಲಿ ಹೆಚ್ಚಿದ ಪ್ರತಿಭಟನೆಗಳು: ಪದ್ಮನಾಭನಗರದಿಂದ ಎಂ.ಶ್ರೀನಿವಾಸ್‍ಗೆ ಟಿಕೆಟ್ ನೀಡಬಾರದು ಎಂದು ಕೆಪಿಸಿಸಿ ಕಚೇರಿ ಮುಂದೆ ಕಾರ್ಯಕರ್ತರ ಧರಣಿ

ಬೆಂಗಳೂರು, ಏ.14- ಟಿಕೆಟ್ ಪ್ರಕಟಗೊಳ್ಳುವ ಮೊದಲೇ ಕಾಂಗ್ರೆಸ್‍ನಲ್ಲಿ ಪ್ರತಿಭಟನೆಗಳು ಜೋರಾಗಿದ್ದು, ಪದ್ಮನಾಭನಗರ ಕ್ಷೇತ್ರದಿಂದ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆ ಧರಣಿ ನಡೆಸಿದರು.

ಎಂ.ಶ್ರೀನಿವಾಸ್ ಅವರು ಬಿಜೆಪಿ ಆರ್.ಅಶೋಕ್ ಅವರ ಗೆಲುವಿಗೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಸೋಲುವುದು ಖಚಿತ. ಹಾಗಾಗಿ ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತ ಗುರ್ರಪ್ಪ ನಾಯ್ಡು ಅವರಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.

ಗುರ್ರಪ್ಪ ನಾಯ್ಡು ಅವರಿಗೆ ಕಳೆದ ಚುನಾವಣೆಯಲ್ಲೂ ಭರವಸೆ ನೀಡಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿಸಲಾಯಿತು. ಆದರೂ ಅವರು ಪಕ್ಷದಲ್ಲೇ ಇದ್ದು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಈ ಬಾರಿ ಗುರ್ರಪ್ಪನಾಯ್ಡು ಅವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಗೆಲ್ಲಲಿದೆ. ಅದನ್ನು ಬಿಟ್ಟು ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲುವುದು ಖಚಿತ ಎಂದು ಕಾರ್ಯಕರ್ತರು ಹೇಳಿದರು.

ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗುರ್ರಪ್ಪನಾಯ್ಡು ಪರವಾಗಿ ಘೋಷಣೆಗಳನ್ನು ಕೂಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ