ಕ್ಷುಲ್ಲಕ ಕಾರಣಕ್ಕೆ ಟೀ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಹುಣಸೂರು, ಏ.13- ಕ್ಷುಲ್ಲಕ ಕಾರಣಕ್ಕೆ ಟೀ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ವಿ.ಪಿ.ಬೋರೆಯ ನಿವಾಸಿ ಮಕ್‍ಬುಲ್ ಅಹಮದ್‍ರ ಪುತ್ರ ಹಬೀಬ್ ಬಂಧಿತ ಆರೋಪಿ.

ಎಚ್‍ಡಿ ಕೋಟೆ ವೃತ್ತದ ಬಳಿ ಇರುವ ಟೀಸ್ಟಾಲ್ ಮಾಲೀಕ ದಾವಣಿ ಬೀದಿಯ ಮಂಜುನಾಥ್ ಹಲ್ಲೆಗೊಳಗಾದವರು.

ಹಲ್ಲೆ ವೇಳೆ ಬಿಡಿಸಲು ಹೋದ ಕಾಳಶೆಟ್ಟಿ ಕೂಡ ಹಲ್ಲೆಗೊಳಗಾಗಿದ್ದು, ಇಬ್ಬರೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಬೀಬ್ ಮೆಕ್ಯಾನಿಕ್ ಆಗಿದ್ದು, ಈತನೂ ಎಚ್‍ಡಿ ಕೋಟೆ ವೃತ್ತದಲ್ಲೇ ತನ್ನ ವರ್ಕ್‍ಶಾಪ್ ಹೊಂದಿದ್ದಾನೆ. ಮಂಜುನಾಥ್‍ರ ಟೀ ಸ್ಟಾಲ್ ಬಳಿಯೇ ಈತನ ಅಂಗಡಿಯೂ ಕೂಡ ಇದೆ. ಪ್ರತಿದಿನ ಹಬೀಬ್ ತನ್ನ ಬುಲೆಟ್ ಗಾಡಿಯನ್ನು ಟೀಸ್ಟಾಲ್ ಮುಂದೆ ನಿಲ್ಲಿಸಿ ತನ್ನ ಕರ್ತವ್ಯಕ್ಕೆ ತೆರಳುತ್ತಿದ್ದ. ಇದರಿಂದ ಮಂಜುನಾಥ್‍ಗೆ ತನ್ನ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಿ ಗಾಡಿಯನ್ನು ಬೇರೆಡೆ ನಿಲ್ಲಿಸುವಂತೆ ಒತ್ತಾಯಿಸಿದ್ದ. ಆದರೆ, ಹಬೀಬ್ ಇದಕ್ಕೆ ಸೊಪ್ಪು ಹಾಕಿರಲಿಲ್ಲ.

ನಿನ್ನೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹಬೀಬ್ ಮಂಜುನಾಥ್‍ರ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಜಗಳ ಬಿಡಿಸಲು ಹೋದ ಕಾಳಶೆಟ್ಟಿಗೆ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹಬೀಬ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ರೌಡಿಶೀಟರ್ ಪಟ್ಟಿಯಲ್ಲಿದ್ದು, ಈತನ ವಿರುದ್ಧ ಐದು ಪ್ರಕರಣಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ