ಕಾಂಗ್ರೆಸ್ ಪರ ಪ್ರಚಾರ ನಡೆಸಲು ಮೆಗಾಸ್ಟಾರ್ ಚಿರಂಜೀವಿ, ಖುಷ್ಬು, ನಗ್ಮಾ ರಾಜ್ಯಕ್ಕೆ ಆಗಮನ: ಮೇ ಮೊದಲ ವಾರದಿಂದ ನಟ-ನಟಿಯರಿಂದ ಪ್ರಚಾರ ಆರಂಭ

ಬೆಂಗಳೂರು, ಏ.12- ಕಾಂಗ್ರೆಸ್ ಪರ ಪ್ರಚಾರ ನಡೆಸಲು ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ತಾರೆಯರ ದಂಡು ರಾಜ್ಯಕ್ಕೆ ಆಗಮಿಸಲಿದೆ.

ಖ್ಯಾತ ಚಲನಚಿತ್ರ ನಟಿಯರಾದ ಖುಷ್ಬು, ನಗ್ಮಾ, ಸೇರಿದಂತೆ ಅನೇಕ ನಟ-ನಟಿಯರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮೇ ಮೊದಲ ವಾರದಲ್ಲಿ ತೆಲುಗು ಭಾಷಿಗರ ಪ್ರಭಾವವಿರುವ ಕಡೆ ಮೆಗಾಸ್ಟಾರ್ ಚಿರಂಜೀವಿ ಅವರು ಕಾಂಗ್ರೆಸ್ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ.
ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಮುಂತಾದ ಕಡೆ ನಟ ಚಿರಂಜೀವಿ ಅವರು ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.

ಅದೇ ರೀತಿ ಖುಷ್ಬು, ನಗ್ಮಾ ಅವರು ಬೆಂಗಳೂರು, ಮೈಸೂರು, ಬೆಳಗಾವಿ ಮುಂತಾದ ಕಡೆ ನಡೆಯಲಿರುವ ಕಾಂಗ್ರೆಸ್ ಪ್ರಚಾರದಲ್ಲಿ ಹಾಗೂ ರೋಡ್‍ಶೋಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕಾ ಚತುರ್ವೇದಿ ಅವರನ್ನೂ ಕೂಡ ಕಾಂಗ್ರೆಸ್ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಸಿದೆ. ಮತ್ತೊಂದು ಮೂಲದ ಪ್ರಕಾರ, ಪಂಜಾಬ್ ಚುನಾವಣಾ ಪ್ರಚಾರದ ಐಕಾನ್ ಆಗಿದ್ದ ಖ್ಯಾತ ಕ್ರಿಕೆಟ್ ಪಟು ನವಜೋತ್‍ಸಿಂಗ್ ಸಿದ್ದು ಅವರನ್ನು ಕೂಡ ಕರ್ನಾಟಕಕ್ಕೆ ಪ್ರಚಾರಕ್ಕಾಗಿ ಕರೆತರುವ ಚಿಂತನೆಯನ್ನು ಕಾಂಗ್ರೆಸ್ ನಡೆಸಿದೆ ಎಂದು ತಿಳಿದುಬಂದಿದೆ.
ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಖ್ಯಾತ ಕ್ರಿಕೆಟ್ ಪಟು ಅಜರುದ್ದೀನ್ ಅವರು ಕಾಂಗ್ರೆಸ್ ಪರ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಈ ಬಾರಿಯೂ ಕೂಡ ಪ್ರಚಾರಕ್ಕೆ ಅವರನ್ನು ಕರೆತರುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿರುವ ಕಾಂಗ್ರೆಸ್, ಚಲನಚಿತ್ರ ತಾರೆಯರು, ಖ್ಯಾತ ಕ್ರಿಕೆಟ್ ಪಟುಗಳು, ಹಿರಿ-ಕಿರಿಯ ಕಲಾವಿದರನ್ನು ಕೂಡ ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ