ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ: ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ಸ್ಪಷ್ಟನೆ

ಬೆಂಗಳೂರು, ಏ.8- ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಎಂದು ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಎದ್ದಿರುವ ಗಾಳಿ ಸುದ್ದಿಗೆ ವಿರಾಮ ನೀಡಿರುವ ರೆಬಲ್ ಸ್ಟಾರ್ ಬಿಜೆಪಿಯ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ.

ಕಳೆದ ವಾರ ಹೈದರಾಬಾದ್‍ನಲ್ಲಿ ಬಿಜೆಪಿಯ ಹಿರಿಯ ಮುಖಂಡ ಕೃಷ್ಣಂರಾಜು ಅವರನ್ನು ಭೇಟಿಯಾಗಿದ್ದ ವೇಳೆ ನಾನಾ ರೀತಿಯ ಕುತೂಹಲ ಸಂಗತಿಗಳು ನಡೆದಿದ್ದವು. ಅಂಬರೀಶ್ ಅವರು ಕಾಂಗ್ರೆಸ್ ಅನ್ನು ಸದ್ಯದಲ್ಲಿಯೇ ತೊರೆಯುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.
ಇದಕ್ಕೆ ಇಂದು ಪೂರ್ಣ ವಿರಾಮ ನೀಡಿರುವ ಅಂಬರೀಶ್ ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಕಾಂಗ್ರೆಸ್‍ನಲ್ಲಿ ನನಗೆ ಎಲ್ಲಾ ರೀತಿಯ ಗೌರವ , ಸ್ಥಾನಮಾನ ಸಿಕ್ಕಿದೆ. ಹೀಗಿರುವಾಗ ಪಕ್ಷ ಬಿಡುವ ಚಿಂತನೆ ನನಗಿಲ್ಲ ಎಂದು ತಿಳಿಸಿದ್ದಾರೆ.
ಮಂಡ್ಯದಿಂದ ಪುನಃ ಸ್ಪರ್ಧಿಸಬೇಕೇ ಅಥವಾ ಚುನಾವಣಾ ರಾಜಕೀಯದಿಂದ ದೂರವಿರಬೇಕೇ ಎಂಬುದರ ಬಗ್ಗೆ ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳುವುದಾಗಿ ಅಂಬರೀಶ್ ತಿಳಿಸಿದ್ದಾರೆ.

ಇದರ ನಡುವೆ ಇಂದು ಸಂಜೆಯ ವೇಳೆಗೆ ಸ್ಪಷ್ಟ ನಿರ್ಧಾರ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಕೂಡ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ