ಕಾಂಗ್ರೆಸ್ ಆಡಳಿತದ ವಿರುದ್ಧ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಹಾಸ್ಯಾಸ್ಪದ: ಸಂಸದ ಡಿ.ಧೃವನಾರಾಯಣ್

ಬೆಂಗಳೂರು, ಏ.3- ಬಿಜೆಪಿಯವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಆಡಳಿತದ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಸಂಸದ ಡಿ.ಧೃವನಾರಾಯಣ್ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆ ಮತ್ತು ರೈತರು ಆತ್ಮಹತ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಬಿಜೆಪಿಯವರು ಕಾಂಗ್ರೆಸ್ ಆಡಳಿತ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದು ಆಧಾರ ರಹಿತ, ಅವಾಸ್ತವ ಮತ್ತು ಅಸಂಬದ್ಧವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ಕೇಂದ್ರ ಮಾಹಿತಿ ತಂತ್ರe್ಞÁನ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿರುವುದು ಸತ್ಯಕ್ಕೆ ದೂರವಾದ ಮಾತು. 2016ರ ವರದಿಯಂತೆ ಅಪರಾಧಗಳು ಹೆಚ್ಚಾಗಿರುವುದು ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ರಾಜಸ್ತಾನ ಮತ್ತು ಬಿಹಾರ ರಾಜ್ಯಗಳಲ್ಲಿ ಮಾತ್ರ. ಆದ್ದರಿಂದ ಬಿಜೆಪಿಯವರು ಆರೋಪ ಪಟ್ಟಿ ಹೆಸರಿನಲ್ಲಿ ಇಲ್ಲಸಲ್ಲದ ಆರೋಪ ಮಾಡುವುದು ಹಾಸ್ಯಾಸ್ಪದವಾಗುತ್ತದೆ ಎಂದು ಹೇಳಿದ್ದಾರೆ.
ರೈತರಿಗೆ ಏನೂ ಮಾಡದ ಬಿಜೆಪಿಯವರು ರೈತರ ಸಾಲ ಮನ್ನಾ ಮಾಡಿ ಶಹಭಾಷ್ ಗಿರಿ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಧೃವನಾರಾಯಣ್ ಟೀಕಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿರುವ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಹಗರಣ, ಅಕ್ರಮ, ಅವ್ಯವಹಾರಗಳು ನಡೆದಿಲ್ಲ. ಅದೇ ಬಿಜೆಪಿ ಆಡಳಿತದಲ್ಲಿ ಹಗರಣಗಳು, ಅಕ್ರಮಗಳು ಲೆಕ್ಕವೇ ಇಲ್ಲದಂತಾಗಿತ್ತು. ಅಷ್ಟೇ ಏಕೆ, ಮುಖ್ಯಮಂತ್ರಿಯಾದಿಯಾಗಿ ಆರಕ್ಕೂ ಹೆಚ್ಚು ಸಚಿವರು ಜೈಲಿಗೆ ಹೋಗಿದ್ದರು. ಇದೆಲ್ಲ ಜನರಿಗೆ ಗೊತ್ತಿದೆ. ಆದರೂ ಬಿಜೆಪಿ ದಾಖಲೆ ಇಲ್ಲದೆ, ಅಂಕಿ-ಅಂಶಗಳನ್ನು ತಿಳಿಯದೆ ಏಕಾಏಕಿ ಆರೋಪ ಪಟ್ಟಿ ಬಿಡುಗಡೆ ಮಾಡಿ ನಗೆಪಾಟಲಿಗೆ ಸಿಲುಕಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ