ಕೆಲವರು ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಾಲಯಕ್ಕೆ ಹೋಗುತ್ತಾರೆ: ರಾಹುಲ್‍ಗಾಂಧಿ ವಿರುದ್ಧ ಸಚಿವ ಅನಂತ್‍ಕುಮಾರ್ ಪರೋಕ್ಷ ವಾಗ್ದಾಳಿ

ಬೆಂಗಳೂರು,ಏ.1-ನಾವು ಹುಟ್ಟಿನಿಂದಲೂ ಭಕ್ತರಾಗಿದ್ದು, ಸದಾ ದೇವಾಲಯಗಳಿಗೆ ಹೋಗುತ್ತೇವೆ. ಕೆಲವರು ಚುನಾವಣೆಗಾಗಿ ಭಕ್ತರಾಗಿದ್ದು, ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಾಲಯಕ್ಕೆ ಹೋಗುತ್ತಾರೆ ಎಂದು ಪರೋಕ್ಷವಾಗಿ ಹೆಸರನ್ನು ಪ್ರಸ್ತಾಪಿಸದೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಟೀಕಿಸಿದರು.

ಬಿಜೆಪಿ ಸಣ್ಣ ಮತ್ತು ಮಧ್ಯಮ ಉದ್ಯೋಗ ಕೈಗಾರಿಕೆ ಪ್ರಕೋಷ್ಟ ಮತ್ತು ನವಕರ್ನಾಟಕ ಜನಪರ ಶಕ್ತಿ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹುಟ್ಟಿನಿಂದ ಭಕ್ತರಾದವರು ಯಾವಾಗಲೂ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಭಕ್ತರಾದವರು ಚುನಾವಣೆಗಾಗಿ ದೇವಾಲಯಗಳಿಗೆ ಹೋಗುತ್ತಾರೆ. ಇಂಥವರನ್ನು ಸೀಜನಲ್ ಭಕ್ತರು ಎಂದು ಕರೆಯಬಹುದು ಎಂದರು.

ಕೇಂದ್ರ ಸರ್ಕಾರ ಮುದ್ರಾ ಯೋಜನೆಯಡಿ ಮೂರೂವರೆ ಲಕ್ಷ ಕೋಟಿ ರೂ. ಸಾಲ ನೀಡಿದ್ದು, ಕೇಂದ್ರ ಸರ್ಕಾರವೇ ಬ್ಯಾಂಕ್‍ಗಳಿಗೆ ಖಾತ್ರಿ ನೀಡಿದೆ ಎಂದರು.
ರಾಹುಲ್ ತಮ್ಮನ್ನು ಎಫ್‍ಕೆಸಿಸಿಐ ಮತ್ತು ಕಾಸಿಯಾ ಸದಸ್ಯತ್ವನಂತೆ ಪರಿಗಣಿಸಿ ನಿಮ್ಮೆಲ್ಲ ಸಮಸ್ಯೆ ಪರಿಹರಿಸಲು ಸಿದ್ಧವಿರುವುದಾಗಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿಹಾಕಿಕೊಟ್ಟಿರುವ ಡಿಜಿಟಲ್ ಇಂಡಿಯಾ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಮುರಳೀಧರ್‍ರಾವ್ ಮಾತನಾಡಿ, ವಿಧಾನಸಭಾ ಕ್ಷೇತ್ರವಾರು ನವಕರ್ನಾಟಕ ಜನಪರ ಶಕ್ತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ