ಏ.7ರ ಮಧ್ಯರಾತ್ರಿಯಿಂದ ದೇಶ ವ್ಯಾಪಿ ಲಾರಿ ಮಾಲಿಕರ ಮುಷ್ಕರ

ಬೆಂಗಳೂರು, ಮಾ.24-ಮೂರನೇ ವ್ಯಕ್ತಿಯ ವಾಹನ ವಿಮೆ ಹಣ ವರ್ಷದಿಂದ ವರ್ಷಕ್ಕೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದನ್ನು ವಿರೋಧಿಸಿ ದೇಶ ವ್ಯಾಪಿ ಏ.7ರ ಮಧ್ಯರಾತ್ರಿಯಿಂದ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಅಖಿಲ ಭಾರತ ಗೂಡ್ಸ್ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ತಿಳಿಸಿದರು.

ನಗರದಲ್ಲಿಂದು ಬೆಂಗಳೂರು ಸಿಟಿ ಇನ್‍ಸ್ಟಿಟ್ಯೂಟ್‍ನಲ್ಲಿ 3ನೇ ವ್ಯಕ್ತಿಯ ವಾಹನ ವಿಮೆಯನ್ನು ಕಡಿತಗೊಳಿಸುವಂತೆ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿಮಾ ನಿಯಂತ್ರಣ ಪ್ರಾಧಿಕಾರ ದರ ಪರಿಷ್ಕರಣೆ ಮಾಡದಿರುವುದು ಇದಕ್ಕೆಲ್ಲ ಕಾರಣ.

ಫಸ್ಟ್ ಪಾರ್ಟಿ ಇನ್ಸೂರೆನ್ಸ್‍ಗೆ ಶೇ.70ರಷ್ಟು ರಿಯಾಯಿತಿ ಕೊಡುತ್ತಿದೆÉ. ಆದರೆ ಥರ್ಡ್ ಪಾರ್ಟಿ ಇನ್ಸೂರೆನ್ಸ್‍ಗೆ ಯಾವುದೇ ರಿಯಾಯಿತಿ ನೀಡುತ್ತಿಲ್ಲ. ಕಳೆದ 10 ವರ್ಷಗಳ ಹಿಂದೆ ಓರಿಯಂಟಲ್, ನ್ಯೂ ಇಂಡಿಯಾ, ಯುನಿಟೆಡ್ ಇಂಡಿಯಾ, ನ್ಯಾಷನಲ್ ಇನ್ಸೂರೆನ್ಸ್ ಎಂಬ ನಾಲ್ಕು ಸಂಸ್ಥೆಗಳು ಮಾತ್ರ ಇತ್ತು. ಈಗ 24 ಖಾಸಗಿ ಇನ್ಸೂರೆನ್ಸ್ ಕಂಪೆನಿಗಳಿವೆ. ಐಆರ್‍ಡಿಎ (ರೆಗ್ಯುರೇಟ್ ಅಂಡ್ ಡೆವಲಪ್‍ಮೆಂಟ್ ಅಥಾರಿಟಿ ಆಫ್ ಇಂಡಿಯಾ) ಸಂಸ್ಥೆ ಇನ್ಸೂರೆನ್ಸ್ ಕಂಪೆನಿಗಳ ದರ ನಿಗದಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಒಂದು ವರ್ಷಕ್ಕೆ 439 ರಿಂದ 1117 ರಷ್ಟು ಥರ್ಡ್ ಪಾರ್ಟಿ ವಿಮಾ ದರ ಹೆಚ್ಚಳವಾಗಿದೆ. ವಿಮಾ ಪ್ರಾಧಿಕಾರ ವಿಮಾ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ಇದೆ ಎಂದು ಆರೋಪಿಸಿದರು.

ವಾರ್ಷಿಕವಾಗಿ ವಿಮಾ ಹಣವನ್ನು ಹೆಚ್ಚಿಸುವ ವಿಮಾ ಕಂಪೆನಿಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ವಿಮಾ ಪ್ರಾಧಿಕಾರವೂ ನಮ್ಮ ಬೇಡಿಕೆ ಈಡೇರಿಸುವಲ್ಲಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿದರು.
7,500ಕೆಜಿ ತೂಕದ ಲಾರಿಗಳಿಗೆ ಹೆಚ್ಚಿನ ದರ ನಿಗದಿಯಾಗಿದೆ. ಇದರಿಂದ ಲಾರಿ ಮಾಲೀಕರಿಗೆ ಹೊರೆಯಾಗುತ್ತಿದೆ ಎಂದು ವಿವರಿಸಿದರು. ಕೃಷ್ಣಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ