ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರ ಸದಸ್ಯತ್ವ ಅನರ್ಹತೆ ಪ್ರಕರಣ: ಹೈಕೋರ್ಟ್ ಸಮನ್ಸ್‍ಗೆ ವಕೀಲರ ಮೂಲಕ ಉತ್ತರ: ಸ್ಪೀಕರ ಕೋಳಿವಾಡ

ಬೆಂಗಳೂರು, ಮಾ.22- ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರ ಸದಸ್ಯತ್ವ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಸಮನ್ಸ್‍ಗೆ ವಕೀಲರ ಮೂಲಕ ಉತ್ತರ ಕೊಡುವುದಾಗಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.

ದೂರುದಾರ ಜೆಡಿಎಸ್ ಶಾಸಕರೊಬ್ಬರ ವಕೀಲರಿಂದ ಸಮನ್ಸ್ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ವಕೀಲರನ್ನು ನೇಮಕ ಮಾಡಿ ಹೈಕೋರ್ಟ್‍ನಲ್ಲಿ ವಾದ ಮಂಡಿಸಲಾಗುವುದು. ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಕಾಯ್ದಿರಿಸಲಾಗಿದ್ದು, ಆ ತೀರ್ಪನ್ನು ಯಾವಾಗ ಬೇಕಾದರೂ ಕೊಡಬಹುದು. ಇಂತಹ ಸನ್ನಿವೇಶದಲ್ಲಿ ನ್ಯಾಯಾಲಯದಿಂದ ಯಾವ ಸಂದೇಶ ಬರುತ್ತದೆ ಕಾದು ನೋಡೋಣ ಎಂದರು.

ವಕೀಲರ ಮೂಲಕ ಸಮನ್ಸ್ ತಲುಪಿದ ನಂತರ ವಿಧಾನಸಭೆ ಕಾರ್ಯದರ್ಶಿ ಹೈಕೋರ್ಟ್‍ಗೆ ತೆರಳಿ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ನೀಡಿದ ವಿಪ್ ಉಲ್ಲಂಘಿಸಿ ಏಳು ಮಂದಿ ಶಾಸಕರು ಮತ ಚಲಾವಣೆ ಮಾಡಿದ್ದು, ಅವರ ಶಾಸಕತ್ವ ಅನರ್ಹಗೊಳಿಸುವಂತೆ ದೂರು ನೀಡಲಾಗಿದೆ. ಈ ಪ್ರಕರಣದ ವಿಚಾರಣೆ ಕೂಡ ಪೂರ್ಣಗೊಳಿಸಲಾಗಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ