ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ನರಹಂತ – ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ನರಹಂತಕ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.

ಮಂಗಳೂರಿನಲ್ಲಿ ನಡೆದ ಜನಸುರಕ್ಷಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ದೇಶದಲ್ಲಿ ನರಹಂತಕ ಹುಲಿಗಳಿವೆ, ನರಹಂತಕ ಸಿಂಹಗಳಿವೆ, ನರಹಂತಕ ಚಿರತೆಗಳಿವೆ, ನರಹಂತಕ ವೀರಪ್ಪನ್ ಬಗ್ಗೆಯೂ ಕೇಳಿದ್ದೀರಿ, ಆದರೆ ಈ ದೇಶದಲ್ಲಿ ನರಹಂತಕ ಮುಖ್ಯಮಂತ್ರಿ ಅಂತ ಯಾರಾದರೂ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ” ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ದೇಶದಲ್ಲಿ ಹಿಂದೂಗಳ ಕೊಲೆಯಾಗುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ. ಅಂತಹ ಮುಖ್ಯಮಂತ್ರಿ ನಿಮಗೇ ಬೇಕಾ ಎಂದು ಸಭಿಕರನ್ನು ಪ್ರಶ್ನಿಸಿದರು. ಅಲ್ಲದೆ, ದೇಶದಲ್ಲಿ ಹಿಂದೂಗಳ ರಕ್ಷಣೆಯಾಗಬೇಕಿದೆ, ಹಿಂದೂಗಳಲ್ಲಿ ನವಚೈತನ್ಯ ತುಂಬಬೇಕಾದ ಅಗತ್ಯವಿದೆ. ಅದಕಾಗಿ ನೀವೆಲ್ಲರೂ ಒಗ್ಗಟ್ಟಾಗಿ ಮುಂದೆ ಬರಬೇಕು ಎಂದು ನಳೀನ್ ಕುಮಾರ್ ಹೇಳಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಪರಸ್ಪರ ವಾಗ್ದಾಳಿ ಮಿತಿ ಮೀರಿದೆ. ಈ ಹಿಂದೆಯೂ ಬಹಳಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದ ನಳೀನ್ ಕುಮಾರ್ ಕಟೀಲ್, ಇಂದು ಸಿದ್ದರಾಮಯ್ಯ ಓರ್ವ ನರಹಂತಕ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ