ಬಡಜನರ ಹಾಗೂ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರೀ ಮಾರುತಿ ಸೇವಾ ಟ್ರಸ್ಟ್‍ಗೆ ಚಾಲನೆ

Varta Mitra News

ಬಡಜನರ ಹಾಗೂ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರೀ ಮಾರುತಿ ಸೇವಾ ಟ್ರಸ್ಟ್‍ಗೆ ಚಾಲನೆ
ಬೆಂಗಳೂರು, ಮಾ.3- ಯುವಕರು ಹೆಚ್ಚು ಹೆಚ್ಚು ಜನ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಆದಿಚುಂಚನಗಿರಿ ಮಠಾಧೀಶರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕರೆ ನೀಡಿದರು.
ನಗರದಲ್ಲಿ ಬಡಜನರ ಹಾಗೂ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಹೊಸದಾಗಿ ಪ್ರಾರಂಭಿಸಿರುವ ಶ್ರೀ ಮಾರುತಿ ಸೇವಾ ಟ್ರಸ್ಟ್‍ಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ದೇಶದಲ್ಲಿ ಸಂಪನ್ಮೂಲದ ಕೊರೆತೆಯಿಲ್ಲ. ಆದರೆ, ಅದರ ಸದ್ಬಳಕೆ ಸರಿಯಾಗಿ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ದೇಶದ ಪ್ರಮುಖ ಸಂಪನ್ಮೂಲವಾಗಿರುವ ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಯುವ ಸಮುದಾಯದ ಸದ್ಬಳಕೆಯಿಂದ ಮಾತ್ರ ದೇಶ ಸರಿ ದಾರಿಯಲ್ಲಿ ಸಾಗಲು ಸಾಧ್ಯ. ಅಲ್ಲದೆ, ಯುವಕರು ಹೆಚ್ಚು ಹೆಚ್ಚು ಜನ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಇದರಿಂದ ದೇಶದ ಕೊನೆ ಹಂತದಲ್ಲಿರುವ ಜನರನ್ನು ಕೆಲವು ಸೌಲಭ್ಯಗಳು ತಲುಪುತ್ತವೆ. ನೂರಾರು ಕನಸುಗಳನ್ನು ಹೊತ್ತು ಪ್ರಾರಂಭವಾಗುತ್ತಿರುವ ಈ ಸೇವಾ ಟ್ರಸ್ಟ್‍ಗೆ ಯಶಸ್ಸು ಲಭಿಸಲಿ ಎಂದು ಆಶೀರ್ವದಿಸಿದರು.
ಟ್ರಸ್ಟ್ ಸಂಸ್ಥಾಪಕ ಮಾರುತಿಗೌಡ ಮಾತನಾಡಿ, ಈ ಸೇವಾ ಟ್ರಸ್ಟ್ ಅಡಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.
ಟ್ರಸ್ಟ್ ಅಡಿಯಲ್ಲಿ ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ