ಇಬ್ಬರು ಸ್ನೇಹಿತರು ಕೆರೆಯಲ್ಲಿ ಇಬ್ಬರು ಜಲಸಮಾಧಿ

ಕುಣಿಗಲ್,ಫೆ.26-ಸಂಬಂಧಿಕರ ಬೀಗರ ಔತಣಕೂಟಕ್ಕೆಂದು ಬಂದಿದ್ದ ಇಬ್ಬರು ಸ್ನೇಹಿತರು ಕೆರೆಯಲ್ಲಿ ಹಸು ಮೈ ತೊಳೆಯಲು ಹೋಗಿದ್ದಾಗ ಇಬ್ಬರು ಜಲಸಮಾಧಿಯಾಗಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಗಿಡದಪಾಳ್ಯ ನಿವಾಸಿಗಳಾದ ಮುನೇಶ(21) ಮತ್ತು ರಂಗಸ್ವಾಮಿ(22) ಮೃತಪಟ್ಟ ಸ್ನೇಹಿತರು.

ರಂಗಸ್ವಾಮಿ ಅವರ ಸಂಬಂಧಿಕರ ಮನೆಯಲ್ಲಿ ಬೀಗರ ಔತಣಕೂಟಕ್ಕೆಂದು ನಿನ್ನೆ ಮುನೇಶನನ್ನು ಜೊತೆಗೆ ಕರೆದುಕೊಂಡು ಕಸಬಾ ಹೋಬಳಿ ಕದರಪುರ ಗ್ರಾಮಕ್ಕೆ ಬಂದಿದ್ದರು.

ಈ ಸಂದರ್ಭದಲ್ಲಿ ರಂಗಸ್ವಾಮಿ ಸಂಬಂಧಿಕರ ಹಸುಗಳನ್ನು ಮೈ ತೊಳೆಯಲು ಕೆರೆ ಬಳಿ ಮುನೇಶನನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮುನೇಶ ಕೆರೆಯಲ್ಲಿ ಜಾರಿದ್ದಾನೆ. ಇದನ್ನು ಗಮನಿಸಿದ ರಂಗಸ್ವಾಮಿ ಆತನ ರಕ್ಷಣೆಗೆ ಮುಂದಾದಾಗ ಇಬ್ಬರೂ ಹೂಳಿನಲ್ಲಿ ಸಿಲುಕಿಕೊಂಡು ನೀರುಪಾಲಾಗಿದ್ದಾರೆ.

ಕೆಲ ಸಮಯದ ಬಳಿಕ ಹಸುಗಳು ಮಾತ್ರ ಮನೆಗೆ ಹೋಗಿವೆ. ಇದನ್ನು ಗಮನಿಸಿ ಅನುಮಾನಗೊಂಡ ಸಂಬಂಧಿಕರು ಕೆರೆ ಬಳಿ ಹೋದಾಗ ಇವರ ಸುಳಿವು ಪತ್ತೆಯಾಗಲಿಲ್ಲ. ತಕ್ಷಣ ಕುಣಿಗಲ್ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಸತತ ಒಂದು ಗಂಟೆ ಶೋಧ ನಡೆಸಿ ಸಂಜೆ ವೇಳೆಗೆ ಕೊನೆಗೂ ಇಬ್ಬರ ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಸಿಪಿಐ ಬಾಳೇಗೌಡ, ಪಿಎಸ್‍ಐ ಮಂಜು ಪರಿಶೀಲನೆ ನಡೆಸಿ ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ