90ನೆಯ ಸಾಹಿತ್ಯ ಸಂಸ್ಕøತಿ ಚಿಂತನೆಯ ಮಾಸಿಕ ಕಾರ್ಯಕ್ರಮ

ಬುದ್ಧನೊಲುಮೆಯ ಕವಿ : ಭೀಮಶೇನ ಎಂ. ಗಾಯಕವಾಡ

ಬೀದರ್: ಬುದ್ಧ ಬಸವ ಅಂಬೇಡ್ಕರರ ವೈಚಾರಿಕ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಚಿಂತನೆಗಳಿಂದ ಪ್ರಭಾವಿತಗೊಂಡು ವೃತ್ತಿಯೊಂದಿಗೆ ಸಾಹಿತ್ಯ ಕೃಷಿಯನ್ನು ರೂಢಿಸಿಕೊಂಡಿರುವ ಭೀಮಶೇನ ಎಂ. ಗಾಯಕವಾಡರು ತಮ್ಮ ಹಾಗೂ ತಮ್ಮವರ ಶತಮಾನದ ನೋವುಗಳಿಗೆ ಕಾವ್ಯರೂಪ ನೀಡಿದ್ದಾರೆ ಎಂದು ಕಲಬುರಗಿಯ ಎನ್.ವಿ. ಪದವಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಸೂರ್ಯಕಾಂತ ಸುಜಾತ ಅಭಿಪ್ರಾಯಪಟ್ಟರು.

ಅವರು ನಗರದ ಜೈನ ಮಂದಿರ ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನವು ಏರ್ಪಡಿಸಿದ 90ನೆಯ ಸಾಹಿತ್ಯ ಸಂಸ್ಕøತಿ ಚಿಂತನೆಯ ಮಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೀಮಶೇನ ಎಂ. ಗಾಯಕವಾಡರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು.

ಕಾವ್ಯ ಬರೀ ಶಬ್ದಗಳ ಸರಮಾಲೆಯಲ್ಲ, ಸಮಕಾಲೀನ ಸಮಸ್ಯೆಗಳಿಗೆ ಆಗಾಗಲೇ ಸ್ಪಂದಿಸುವ ಗುಣವನ್ನು ಹೊಂದಿರುತ್ತದೆ. ಸಾವಿರಾರು ವರ್ಷಗಳಿಂದಲೂ ದಲಿತರು ಅನುಭವಿಸುತ್ತಿರುವ ನೋವು ನಲಿವುಗಳನ್ನು ಅಕ್ಷರಪಾತಳಿಗಿಳಿಸುವ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿರುವ ಭೀಮಶೇನ ಗಾಯಕವಾಡರ ಬರಹವು ವೈಶಿಷ್ಟ್ಯದಿಂದ ಕೂಡಿದೆ. ‘ನಲಿದಾಡಿ ಹೊಳೆಯುವ ಮುತ್ತಗಳೆ’ ಬುದ್ಧನೊಲುಮೆಯ ಆಧುನಿಕ ವಚನಗಳು’ ‘ಬೆಸಗರಹಳ್ಳಿ ರಾಮಣ್ಣನವರ ಕಥೆಗಳು’ ‘ಸಮರಸಜೀವಿ’ಯಂತಹ ಮೌಲಿಕ ನೀಡಿರುವ ಅವರ ಸಂಶೋಧನೆ, ಕಾವ್ಯ, ಆಧುನಿಕ ವಚನ ಸಾಹಿತ್ಯ, ಸಂಪಾದನೆಗಳೆಲ್ಲ ಅತ್ಯಂತ ಪ್ರಗತಿಪರ ಆಲೋಚನೆಗಳನ್ನು ಒಳಗೊಂಡಿವೆ ಎಂದು ಪ್ರತಿಪಾದಿಸಿದರು.

ಬಿ. ಶಾಮಸುಂದರ, ಪಂಚಶೀಲ ಕಾಶೀನಾಥ ಗವಾಯಿ ಮುಂತಾದವರ ಪ್ರಭಾವ, ತಂದೆ ತಾಯಿಗಳ ಪ್ರೇರಣೆ ಹಾಗೂ ಡಾ. ಗವಿಸಿದ್ಧಪ್ಪ ಪಾಟೀಲ ಸಾಹಿತ್ಯ ದಂಪತಿಗಳ ಅನನ್ಯ ಸಹಕಾರವು ಅವರ ಕಾವ್ಯಕ್ಕೆ ಜೀವಸೆಲೆಯಾಗಿದೆ ಎನಿಸುತ್ತದೆ. ಹೀಗೆ ಭೀಮಶೇನ ಗಾಯಕವಾಡರು ಸೃಜನಶೀಲ, ಪ್ರಯತ್ನಶೀಲ ನೆಲೆಯಿಂದ ತಮ್ಮ ಸಾಹಿತ್ಯವನ್ನು ಜೀವಪರತೆಗೊಳಿಸುತ್ತ ಸಾಗಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಕೇಂದ್ರಬಿಂದುಗಳಾಗಿದ್ದ ಭೀಮಶೇನ ಎಂ. ಗಾಯಕವಾಡ ಅವರು ಮಾತನಾಡುತ್ತ- ಬುದ್ಧನ ಸಮಾನತೆ, ಬಸವಣ್ಣನ ಸಹೋದರತೆ, ಅಂಬೇಡ್ಕರರ ಸ್ವಾತಂತ್ರ್ಯತೆ, ಸ್ವಾಮಿ ವಿವೇಕಾನಂದರ ವಿಶ್ವಭ್ರಾತೃತ್ವ, ಕನಕದಾಸರ ಅಂಬಿಗರ ಚೌಡಯ್ಯನವರ ವೈಚಾರಿಕ ಚಿಂತನೆ ಮತ್ತು ಸಮಾನತೆಯ ತತ್ವಗಳು ನನ್ನ ಬರಹಕ್ಕೆ ಬುನಾದಿಯಾಗಿದ್ದು, ವೈಜ್ಞಾನಿಕ ಮತ್ತು ವೈಚಾರಿಕ ನಿಲುವುಗಳನ್ನು ಪ್ರತಿಪಾದಿಸುವ ಸಲುವಾಗಿಯೆ ನಾನು ಬರವಣಿಗೆ ಪ್ರಾರಂಭಿಸಿದ್ದೇನೆ ಎಂದು ತಿಳಿಸಿದರು. ಬರಹ ವ್ಯಕ್ತಿಕೇಂದ್ರಿತವಾದಾಗ ಸಮಾಜದಿಂದ ವಿಮುಖವಾಗುತ್ತದೆ. ಜೀವಪರ ಸಂವೇದನೆಗಳಿಗೆ ತುಡಿಯುತ್ತ, ಮಾನವೀಯ ಕಳಕಳಿಗೆ ಅಣಿಗೊಳಿಸುವ ಸಾಹಿತ್ಯವು ಬಹುಕಾಲ ನೆಲೆ ನಿಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಮಾತು: ಇಂದಿನ ಸಾಹಿತಿ, ಕಲಾವಿದ, ಸಂಘಟಕರಿಗೆ ಮಾರ್ಗದರ್ಶಿಯಾಗಬಲ್ಲ ಕಾರ್ಯಕ್ರಮಗಳನ್ನು ಈ ಪ್ರತಿಷ್ಠಾನ ಹಮ್ಮಿಕೊಳ್ಳುತ್ತ ಬಂದಿದೆ. ಇದನ್ನು ನಮ್ಮವರು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಮಪುರ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ ಮಹಿಳಾ ಚಿಂತಕಿ ವಿಜಯಾ ದಬ್ಬೆ ಮತ್ತು ಬಹುಭಾಷಾ ಚಿತ್ರನಟಿ ಶ್ರೀದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಂ.ಜಿ. ದೇಶಪಾಂಡೆ ಪ್ರತಿಷ್ಠಾನದಿಂದ ಭೀಮಶೇನ ಗಾಯಕವಾಡರಿಗೆ ಕಾವ್ಯ ಚೈತನ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ