ಭಾರತವನ್ನು ನೇರವಾಗಿ ಎದುರಿಸಲಾಗದ ಪಾಕ್ ಉಗ್ರರನ್ನು ನುಗ್ಗಿಸಿ ದಾಳಿ ಮಾಡುತ್ತಿದೆ: ಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ

ಶ್ರೀನಗರ:ಫೆ-11:  ಸುಂಜ್ವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ದುರ್ವರ್ತನೆಗೆ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇದು ನಿಜಕ್ಕೂ ಖಂಡನೀಯ ವರ್ತನೆ. ಭಾರತವನ್ನು ನೇರವಾಗಿ ಎದುರಿಸಲಾಗದ ಪಾಕಿಸ್ತಾನ, ಉಗ್ರರನ್ನು ಗಡಿ ನುಗ್ಗಿಸಿ ನಾಗರೀಕರ ಮೇಲೆ ದಾಳಿ ಮಾಡುವಂತೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕ್ಯಾಂಪ್ ಸುತ್ತಮುತ್ತಲೂ ನಾಗರೀಕರ ಪ್ರದೇಶಗಳಿದ್ದು, ಈ ಹಿನ್ನಲೆಯಲ್ಲಿ ಸೇನಾಪಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯಾಚರಣೆಗಳನ್ನು ಮುಂದುವರೆಸುತ್ತಿವೆ ಎಂದು ತಿಳಿಸಿದ್ದಾರೆ.

ನಿನ್ನೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರ ಸುಂಜ್ವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಸುಬೇದಾರ್ ಲಾಲ್ ಚೌಧರಿ ಮತ್ತು ಸುಬೇದಾರ್ ಮೊಹಮ್ಮದ್ ಅಶ್ರಫ್ ಮಿರ್ ಎಂಬ ಅಧಿಕಾರಿಗಳು ಹುತಾತ್ಮರಾಗಿದ್ದಾರೆ, ಅಲ್ಲದೆ, ಓರ್ವ ನಾಗರೀಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಉಗ್ರ ದಾಳಿಗೆ ದಿಟ್ಟ ಉತ್ತರ ನೀಡಿರುವ ಸೇನಾಪಡೆಗಳು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

 

ಫೋಟೋ ಕ್ರೆಡಿಟ್: ndtv.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ